ಕುಂದಾಪುರದಲ್ಲಿ ನಿಲ್ಲದ ಟಿಪ್ಪರ್ ಹಾವಳಿ : ರಸ್ತೆ ಅಪಘಾತದಲ್ಲಿ ಬಾಣಸಿಗ ಬಲಿ
ಕುಂದಾಪುರ ತಾಲೂಕಿನ ಶೆಟ್ರಕಟ್ಟೆಯಲ್ಲಿ ಸಂಭವಿಸಿದ ಸರ್ಕಾರಿ ಬಸ್ ಹಾಗೂ ಟಿಪ್ಪರ್ ಅಪಘಾತದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ದುರಂತ ಸಂಭವಿಸಿದೆ. ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬಾಣಸಿಗರೊಬ್ಬರು ಮೃತಪಟ್ಟಿದ್ದಾರೆ. ಮೂಲತಃ ಆಲೂರಿನವರಾಗಿ ಪ್ರಸ್ತುತ ಕೋಟೇಶ್ವರದ ಅಂಕದಕಟ್ಟೆ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ 52 ವರ್ಷದ ಕೃಷ್ಣಮೂರ್ತಿ ಅಡಿಗ ಎಂಬವರು ಈ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ.
ವೃತ್ತಿಯಲ್ಲಿ ಬಾಣಸಿಗರಾದ ಕೃಷ್ಣಮೂರ್ತಿ ಅಡಿಗ ಅವರು ವಾರದ ಹಿಂದಷ್ಟೇ ದ್ವಿಚಕ್ರ ವಾಹನ ಖರೀದಿಸಿದ್ದರು. ಅಡುಗೆ ಕಾರ್ಯವೊಂದರ ಸಿದ್ಧತೆಯಲ್ಲಿದ್ದ ಕೃಷ್ಣಮೂರ್ತಿ ಅಡಿಗೆ ಗಾಡಿಗೆ ಪೆಟ್ರೋಲ್ ಹಾಕಿಸಬೇಕೆಂದು ಮನೆಯಿಂದ ಹೊರಟಿದ್ದಾರೆ .
ಇದನ್ನೂ ಓದಿ: ಶೆಟ್ರಕಟ್ಟೆ ಅಪಘಾತ ಪ್ರಕರಣ: ಪೊಲೀಸ್ ಸಿಬ್ಬಂದಿ ತಲೆದಂಡ…
ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ತಿರುಗುವ ಸಂದರ್ಭದಲ್ಲಿ ಎದುರಿನಿಂದ ಯಮರೂಪಿಯಂತೆ ಬಂದ ಟಿಪ್ಪರ್ ಕೃಷ್ಣಮೂರ್ತಿ ಅಡಿಗ ಚಲಾಯಿಸುತ್ತಿದ್ದ ಗಾಡಿಗೆ ಬಂದು ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕೃಷ್ಣಮೂರ್ತಿ ಅವರ ತಲೆಗೆ ಭಾರೀ ಏಟಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



