ಶಾಸಕ ವಿನಯ್​ ಕುಲಕರ್ಣಿ ಕೊಲೆಗಾರ : ಶಿಕ್ಷೆ ಪ್ರಮಾಣ ಇಂದು ಪ್ರಕಟ

ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಠಿಸಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಯೋಗೇಶ್​ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್​ ಕುಲಕರ್ಣಿ ವಿರುದ್ಧ ಎದುರಾಗಿದ್ದ ಕೊಲೆ ಆರೋಪ ಸಾಬೀತಾಗಿದೆ. ಈ ಪ್ರಕರಣದ ವಿಚಾರಣೆ ಕೈಗೆತ್ತಕೊಂಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿನಯ್​ ಕುಲಕರ್ಣಿ, ಪೊಲೀಸ್​ ಇನ್ಸ್​​ಪೆಕ್ಟರ್​ ಆಗಿದ್ದ ಚನ್ನಕೇಶವ ಟಿಂಗರೀಕರ್​ ಸೇರಿದಂತೆ 17 ಮಂದಿ ಆರೋಪಿಗಳನ್ನು ದೋಷಿ ಎಂದು ತೀರ್ಪು ಪ್ರಕಟಿಸಿದೆ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಇಂದು ಘೋಷಿಸಲಿದೆ.

ಬರೋಬ್ಬರಿ 8 ವರ್ಷಗಳವರೆಗೆ ಈ ಕೊಲೆ ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್​ ಕೊನೆಗೂ ತನ್ನ ಅಂತಿಮ ತೀರ್ಪು ಪ್ರಕಟಿಸಿದೆ. ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ ಶಾಸಕ ವಿನಯ್​ ಕುಲಕರ್ಣಿ, ಕೋರ್ಟ್​ನಲ್ಲೇ ಕುಸಿದುಬಿದ್ದು ಕಣ್ಣೀರು ಹಾಕಿದ್ದಾರೆ. ಕೋರ್ಟ್​ನಲ್ಲೇ ಇದ್ದ ವಿನಯ್​ ಕುಲಕರ್ಣಿ ಮಕ್ಕಳು ಕೂಡ ತಂದೆಯ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.

ಜೂನ್​​​ 16, 2016ರಲ್ಲಿ ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೇಶ್​ ಗೌಡ ಹತ್ಯೆ ಸಂಭವಿಸಿತ್ತು. ರಾಜಕೀಯ ದ್ವೇಷದ ಕೊಲೆ ಇದು ಎಂದಿದ್ದ ಪೊಲೀಸ್​ ತನಿಖೆಯು 6 ಮಂದಿಯನ್ನು ಆರೋಪಿಗಳೆಂದು ಗುರುತಿಸಿತ್ತು. 2019ರಲ್ಲಿ ಈ ಕೊಲೆಯ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು. 2020ರಲ್ಲಿ ಶಾಸಕ ವಿನಯ್​ ಕುಲಕರ್ಣಿಯನ್ನು ಬಂಧಿಸಲಾಗಿತ್ತು. ಬಳಿಕ ವಿನಯ್​ ಕುಲಕರ್ಣಿ ಸೇರಿದಂತೆ 21 ವಿರುದ್ಧ ಸಿಬಿಐ ಚಾರ್ಜ್ ಶೀಟ್​ ಸಲ್ಲಿಕೆ ಮಾಡಿತ್ತು.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಘನಗೋರ ದುರಂತ: ಮೆರವಣಿಗೆಯ ಮೇಲೆಯೇ ಹರಿದ ಕಾರು; 7 ವರ್ಷದ ಬಾಲಕಿ ದುರ್ಮರಣ

ಇನ್ನು ಈ ಪ್ರಕರಣದಲ್ಲಿ ವಿನಯ್​ ಕುಲಕರ್ಣಿ ದೋಷಿ ಎಂದು ತೀರ್ಪು ಪ್ರಕಟಗೊಳ್ಳುತ್ತಿದ್ದಂತೆಯೇ ಅವರ ಶಾಸಕ ಸ್ಥಾನಕ್ಕೂ ಕುತ್ತು ಎದುರಾಗಿದೆ. ಇಂದು ಕೋರ್ಟ್​ನಲ್ಲಿ ತೀರ್ಪಿನ ಪ್ರಮಾಣ ಪ್ರಕಟಗೊಳ್ಳಲಿದ್ದು , ಯಾವುದೇ ಪ್ರಕರಣದಲ್ಲಿ 2 ವರ್ಷಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಎದುರಾದರೆ ಶಾಸಕ ಸ್ಥಾನ ರದ್ದುಗೊಳ್ಳಲಿದೆ. ಈ ಪ್ರಕರಣದಲ್ಲಿ ವಿನಯ್​ ಕುಲಕರ್ಣಿಗೆ ಜೀವಾವಧಿ ಇಲ್ಲವೇ ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆ ದಟ್ಟವಾಗಿದ್ದು, ವಿನಯ್​ ಕುಲಕರ್ಣಿಯ ರಾಜಕೀಯ ಭವಿಷ್ಯ ತೂಗುಗತ್ತಿಯಲ್ಲಿ ನಿಂತಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories