ಬ್ಯಾಂಕ್ ಖಾತೆದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟರೆ ಹಣ ಯಾರಿಗೆ ಸೇರುತ್ತದೆ?

ಖಾತೆದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟ ಸಂದರ್ಭಗಳಲ್ಲಿ ಬ್ಯಾಂಕ್ ಹಣ ಯಾರಿಗೆ ಸೇರುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ ಕುಟುಂಬದಲ್ಲಿ ವಿವಾದಗಳು ಉಂಟಾಗುತ್ತವೆ, ಆದ್ದರಿಂದ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಅಗತ್ಯ.

ಬ್ಯಾಂಕ್ ಖಾತೆಯಲ್ಲಿ ಸಂಗ್ರಹಿಸಿರುವ ಹಣವು ನಂತರ ಯಾರಿಗೆ ಹೋಗಬೇಕು ಎಂಬುದು ಸರಿಯಾಗಿ ತಿಳಿದುಕೊಳ್ಳದಿದ್ದರೆ ಕುಟುಂಬದಲ್ಲಿ ಅನಗತ್ಯ ಗೊಂದಲಗಳು ಉಂಟಾಗುತ್ತವೆ. ಬಹಳ ಮಂದಿ ನಾಮಿನಿ ಇದ್ದರೆ ಆತನಿಗೆ ಸಂಪೂರ್ಣ ಹಕ್ಕು ಸಿಗುತ್ತದೆ ಎಂದು ಭಾವಿಸುವುದು ಸಾಮಾನ್ಯ, ಆದರೆ ಇದು ಸಂಪೂರ್ಣ ಸತ್ಯವಲ್ಲ.

ನಾಮಿನಿಯ ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ. ಖಾತೆದಾರರು ಮೃತಪಟ್ಟ ನಂತರ ಬ್ಯಾಂಕ್ ಪ್ರಕ್ರಿಯೆ ಸುಲಭವಾಗಲು ನಾಮಿನಿಯನ್ನು ನೇಮಿಸಲಾಗುತ್ತದೆ. ಬ್ಯಾಂಕ್ ಹಣವನ್ನು ಬಿಡುಗಡೆ ಮಾಡುವಲ್ಲಿ ನಾಮಿನಿ ಸಹಾಯಕನಾಗುತ್ತಾನೆ. ಆದರೆ ಆ ಹಣದ ನಿಜವಾದ ಮಾಲೀಕತ್ವ ನಾಮಿನಿಗೆ ಸಿಗುವುದಿಲ್ಲ.

ಆರ್ಬಿಐ ನಿಯಮಗಳ ಪ್ರಕಾರ, ಬ್ಯಾಂಕ್ ನಾಮಿನಿಗೆ ಹಣ ನೀಡಿದರೆ ಅದರ ಹೊಣೆಗಾರಿಕೆ ಮುಗಿದಂತಾಗುತ್ತದೆ. ನಂತರ ಕುಟುಂಬದ ಒಳಗಿನ ಹಕ್ಕುಗಳ ವಿಚಾರದಲ್ಲಿ ಬ್ಯಾಂಕ್ ತಲೆಹಾಕುವುದಿಲ್ಲ. ಈ ಕಾರಣದಿಂದ ನಾಮಿನಿ ಕೇವಲ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುತ್ತಾನೆ.

ಈ ವಿಷಯದಲ್ಲಿ ಮಹತ್ವದ ಸ್ಪಷ್ಟತೆಯನ್ನು ನೀಡಿದ್ದು ಸುಪ್ರೀಂ ಕೋರ್ಟ್‌ನ ಸರಬತಿ ದೇವಿ ವಿರುದ್ಧ ಉಷಾ ದೇವಿ ತೀರ್ಪು. ಈ ತೀರ್ಪಿನಲ್ಲಿ ನಾಮಿನಿ ಕೇವಲ ಹಣ ಸ್ವೀಕರಿಸುವ ವ್ಯಕ್ತಿ ಮಾತ್ರ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅಂತಿಮ ಹಕ್ಕು ಲೀಗಲ್ ಹೆಯಿರ್ಸ್‌ಗೆ ಸೇರಿದೆ. ವಿಲ್ ಇದ್ದರೆ ಅದರ ಪ್ರಕಾರ ಹಂಚಿಕೆ ನಡೆಯುತ್ತದೆ.

ಇದೇ ನಿಯಮವು ಬ್ಯಾಂಕ್ ಖಾತೆಗಳಷ್ಟೇ ಅಲ್ಲದೆ ಫಿಕ್ಸ್ಡ್ ಡೆಪಾಸಿಟ್, ಮ್ಯೂಚುವಲ್ ಫಂಡ್ಸ್, ಶೇರುಗಳು ಮತ್ತು ಇತರ ಹೂಡಿಕೆಗಳಿಗೂ ಅನ್ವಯಿಸುತ್ತದೆ. ನಾಮಿನಿ ವ್ಯವಸ್ಥೆ ಹಣ ವರ್ಗಾವಣೆಯನ್ನು ಸುಲಭಗೊಳಿಸುತ್ತದೆ, ಆದರೆ ಆಸ್ತಿ ಹಕ್ಕನ್ನು ನಿರ್ಧರಿಸುವುದಿಲ್ಲ.

ಖಾತೆದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟರೆ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗುತ್ತದೆ. ಹಣ ಬಿಡುಗಡೆ ಆಗುವ ಮುನ್ನ ಇಬ್ಬರೂ ಮೃತಪಟ್ಟರೆ, ನಾಮಿನೇಶನ್ ಅಮಾನ್ಯವಾಗುತ್ತದೆ. ಆಗ ಬ್ಯಾಂಕ್ ನೇರವಾಗಿ ಲೀಗಲ್ ಹೆಯಿರ್ಸ್‌ನ್ನು ಸಂಪರ್ಕಿಸುತ್ತದೆ. ಅವರು ತಮ್ಮ ಹಕ್ಕುಗಳನ್ನು ಡಾಕ್ಯುಮೆಂಟ್‌ಗಳ ಮೂಲಕ ಸಾಬೀತುಪಡಿಸಬೇಕು.

ಒಂದೇ ವೇಳೆ, ನಾಮಿನಿ ಮೊದಲು ಹಣ ಪಡೆದು ನಂತರ ಮೃತಪಟ್ಟರೆ, ಆ ಹಣ ತಾತ್ಕಾಲಿಕವಾಗಿ ನಾಮಿನಿಯ ಆಸ್ತಿಯ ಭಾಗವಾಗಿ ಕಾಣಬಹುದು. ಆದರೆ ಮೂಲ ಖಾತೆದಾರರ ಕುಟುಂಬದವರು ತಮ್ಮ ಹಕ್ಕಿಗಾಗಿ ಮುಂದಾಗಬಹುದು. ಇದು ಎರಡು ಕುಟುಂಬಗಳ ನಡುವೆ ದೀರ್ಘಕಾಲದ ವಿವಾದಕ್ಕೆ ಕಾರಣವಾಗಬಹುದು.

ಹೆಚ್ಚಿನ ಜನರು ಹಣ ಸಂಪಾದನೆಗೆ ಹೆಚ್ಚು ಗಮನ ಕೊಡುತ್ತಾರೆ, ಆದರೆ ನಂತರ ಅದು ಸರಿಯಾಗಿ ಹಂಚಿಕೆ ಆಗುವ ಬಗ್ಗೆ ಯೋಜನೆ ಮಾಡುವುದನ್ನು ಮರೆತು ಬಿಡುತ್ತಾರೆ. ನಾಮಿನಿ ಅಪ್‌ಡೇಟ್ ಮಾಡದಿರುವುದು, ವಿಲ್ ತಯಾರಿಸದಿರುವುದು ಮತ್ತು ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳದಿರುವುದು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹೀಗಾಗಿ ಫೈನಾನ್ಷಿಯಲ್ ಪ್ಲಾನಿಂಗ್ ಎಂದರೆ ಕೇವಲ ಹೂಡಿಕೆ ಮತ್ತು ಹಣ ಸಂಗ್ರಹವಲ್ಲ. ಸರಿಯಾದ ನಾಮಿನೇಷನ್, ವಿಲ್ ಮತ್ತು ಸಕ್ಸೆಷನ್ ಯೋಜನೆ ಕೂಡ ಅಷ್ಟೇ ಮುಖ್ಯ. ಇವು ಇದ್ದರೆ ಕುಟುಂಬದವರಿಗೆ ಅನಗತ್ಯ ಕಷ್ಟಗಳು ತಪ್ಪುತ್ತವೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories