ರಾಜ್ಯದಲ್ಲಿ ದುರ್ಬಲಗೊಂಡ ನೈಋತ್ಯ ಮುಂಗಾರು.. ಬರಗಾಲ ಎದುರಿಸಲು ಸಜ್ಜಾಗಿ ಎಂದ ಸಿಎಂ ಡಿ.ಕೆ ಶಿವಕುಮಾರ್

ರಾಜ್ಯದಲ್ಲಿ ಈ ವರ್ಷದ ನೈಋತ್ಯ ಮುಂಗಾರು ಮಳೆ ಆರಂಭದಲ್ಲೇ ತೀವ್ರ ನಿರಾಶೆ ಮೂಡಿಸಿದ್ದು, ಜೂನ್ ಮೊದಲ ಅವಧಿಯಲ್ಲಿ ಶೇಕಡಾ 21 ರಷ್ಟು ಮಳೆ ಕೊರತೆ ದಾಖಲಾಗಿದೆ

ರಾಜ್ಯದಲ್ಲಿ ಈ ವರ್ಷದ ನೈಋತ್ಯ ಮುಂಗಾರು ಮಳೆ ಆರಂಭದಲ್ಲೇ ತೀವ್ರ ನಿರಾಶೆ ಮೂಡಿಸಿದ್ದು, ಜೂನ್ ಮೊದಲ ಅವಧಿಯಲ್ಲಿ ಶೇಕಡಾ 21 ರಷ್ಟು ಮಳೆ ಕೊರತೆ ದಾಖಲಾಗಿದೆ. ವಿಶೇಷವಾಗಿ ದಟ್ಟ ಮಳೆಗೆ ಹೆಸರಾದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕ್ರಮವಾಗಿ ಶೇ 41 ಮತ್ತು ಶೇ 36 ರಷ್ಟು ಮಳೆಯ ಅಭಾವ ತಲೆದೋರಿದೆ. ಎಲ್ ನಿನೋ ವಿದ್ಯಮಾನದ ತೀವ್ರ ಪ್ರಭಾವದಿಂದಾಗಿ ಮುಂಗಾರು ಮಾರುತಗಳು ದುರ್ಬಲಗೊಂಡಿರುವುದೇ ಈ ಪರಿಸ್ಥಿತಿಗೆ ಪ್ರಮುಖ ಕಾರಣ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಯ ಕೊರತೆಯ ಜೊತೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನವು 38 ರಿಂದ 40.5 ಡಿಗ್ರಿ ಸೆಲ್ಶಿಯಸ್‌ವರೆಗೆ ದಾಖಲಾಗುತ್ತಿದ್ದು, ಸಾರ್ವಜನಿಕರು ಜೂನ್ ತಿಂಗಳಿನಲ್ಲೂ ಬೇಸಿಗೆಯಂತಹ ಬಿಸಿಲ ಬೇಗೆಯನ್ನು ಅನುಭವಿಸುವಂತಾಗಿದೆ. ಮಳೆ ಕೊರತೆ ಮತ್ತು ಹೆಚ್ಚುತ್ತಿರುವ ತಾಪಮಾನದ ಜಂಟಿ ಹೊಡೆತಕ್ಕೆ ರಾಜ್ಯದ ಪ್ರಮುಖ 14 ಜಲಾಶಯಗಳ ಒಳಹರಿವು ಸಂಪೂರ್ಣ ಕುಸಿದಿದೆ. ಒಟ್ಟು 896 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯಗಳಲ್ಲಿ ಸದ್ಯ ಕೇವಲ ಶೇ 23 ರಷ್ಟು ಮಾತ್ರ ನೀರು ಬಾಕಿ ಉಳಿದಿದೆ. ಕಾವೇರಿ ಮತ್ತು ಕೃಷ್ಣಾ ನದಿ ಕೊಳ್ಳದ ಪ್ರಮುಖ ಡ್ಯಾಂಗಳು ತಳ ಸೇರುತ್ತಿರುವುದು ಕೃಷಿ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಮುಂಗಾರು ದುರ್ಬಲ.. ರೈತರಿಗೆ ಕಂಟಕ ತರಲಿದೆ ಎಲ್ನಿನೋ ಪ್ರಭಾವ

ಪರಿಸ್ಥಿತಿಯ ಗಾಂಭೀರ್ಯವನ್ನು ಅರಿತಿರುವ ರಾಜ್ಯ ಸರ್ಕಾರ, ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಕಾಯ್ದಿರಿಸಲು ಮೊದಲ ಆದ್ಯತೆ ನೀಡಿದೆ. ಕೃಷಿ ಸೇರಿದಂತೆ ಇತರೆ ಇಲಾಖೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ಯೋಜನೆಗಳನ್ನು ರೂಪಿಸಿಕೊಳ್ಳಲು ಕಂದಾಯ ಇಲಾಖೆ ಸೂಚನೆ ನೀಡಿದೆ. ಜುಲೈ ಮೊದಲ ವಾರದಲ್ಲಿ ಜಲಾಶಯಗಳ ನೀರಿನ ಮಟ್ಟವನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರವೇ, ರಾಜ್ಯದಲ್ಲಿ ಬರ ಪರಿಸ್ಥಿತಿ ಘೋಷಿಸುವ ಕುರಿತು ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಆದರೆ ವಿವಿಧ ಇಲಾಖೆಗಳ ಜೊತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿಎಂ ಡಿ.ಕೆ ಶಿವಕುಮಾರ್​, ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಿಸಲು ಸಜ್ಜಾಗಿ ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯಕ್ಕೆ ಹವಾಮಾನದಲ್ಲಿ ಯಾವುದೇ ಪೂರಕ ಬದಲಾವಣೆಗಳ ಮುನ್ಸೂಚನೆ ಇಲ್ಲದಿರುವುದು ರೈತ ಸಮುದಾಯವನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.‌

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories