ಅಮೂಲ್ಯ ಲಿಯೋನ್ ಹಿಂದೆ ಕಾಣದ ಕೈ ! ನಕ್ಸಲ್ ಸಂಘಟನೆಯೊಂದಿಗಿದ್ಯಾ ಆಕೆಗಿದ್ಯಾ ನಂಟು ?

0

ಬೆಂಗಳೂರು : ಪಾಕಿಸ್ತಾನಕ್ಕೆ ಜೈಕಾರ ಕೂಗಿದ್ದ ಅಮೂಲ್ಯ ಲಿಯೋನ್ ಹಿಂದೆ ಕಾಣದ ಕೈಗಳು ಕೆಲಸ ಮಾಡ್ತಿವೆಯಾ? ಆಕೆ ನಕ್ಸಲ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಳಾ ? ಇಷ್ಟು ಚಿಕ್ಕ ವಯಸ್ಸಲ್ಲೇ ದೇಶದ್ರೋಹದ ಘೋಷಣೆ ಕೂಗಿರೋ ಆಕೆಯ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ. ಇದೆಲ್ಲದರ ಬೆನ್ನಲ್ಲೇ ಆಕೆಯ ತಂದೆ ನೀಡಿರೋ ಹೇಳಿಕೆ ಅನುಮಾನಗಳಿಗೆ ಪುಷ್ಪಿ ನೀಡುವಂತಿದೆ.

ಹೌದು, ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಸಿಲಿಕಾನ್ ಸಿಟಿಯಲ್ಲಿ ನಡೆದ ಪ್ರತಿಭಟನೆಯ ವೇಳೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರದ ನಿವಾಸಿ ಅಮೂಲ್ಯ ಲಿಯೋನ್ ಪಾಕಿಸ್ತಾನಕ್ಕೆ ಜೈಕಾರ್ ಕೂಗಿದ್ದಳು. ಎರಡೆರಡು ಬಾರಿ ಪಾಕಿಸ್ತಾನದ ಮೇಲೆ ಪ್ರೀತಿಯನ್ನು ತೋರ್ಪಡಿಸುತ್ತಲೇ ಸಂಘಟಕರು ಆಕೆಯ ಕೈಯಿಂದ ಮೈಕ್ ಕಿತ್ತುಕೊಂಡಿದ್ರು. ಪೊಲೀಸರು ಆಕೆಯನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು. ಮಾತ್ರವಲ್ಲ ನ್ಯಾಯಾಲಯ ಆಕೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಇದರ ಬೆನ್ನಲ್ಲೇ ಅಮೂಲ್ಯ ತಂದೆ ಖಾಸಗಿ ವಾಹಿನಿಗೆ ನೀಡಿರೋ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ತನ್ನೊಬ್ಬಳೇ ಮಗಳನ್ನು ಕಾಲೇಜು ಬಿಡಿಸಲಾಗಿತ್ತು. ಸಿಎಎ ಪರ ನಡೆದೆ ಪ್ರತಿಭಟನೆಯಲ್ಲಿ ಆಕೆಯನ್ನು ಬಳಸಿಕೊಳ್ಳಲಾಗಿತ್ತು. ಆಕೆಯನ್ನು ಕಾಲೇಜಿಗೆ ಕಳುಹಿಸುವಂತೆ ಪರಿಪರಿಯಾಗಿ ಕೇಳಿಕೊಂಡಿದ್ದರು ಪ್ರಯೋಜನವಾಗಿರಲಿಲ್ಲ. ತನ್ನ ಮಗಳ ದೇಶದ್ರೋಹದ ಕೆಲಸದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಅಂತಾ ಗಂಭೀರವಾದ ಆರೋಪ ಮಾಡಿದ್ದಾರೆ. ಮಾತ್ರವಲ್ಲ ಅಮೂಲ್ಯ ಲಿಯೋನ್ ಕೂಡ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿಯೂ ಕೂಡ ತಾನು ಕೇವಲ ಮುಖವಷ್ಟೇ, ತನ್ನ ಹಿಂದೆ ದೊಡ್ಡ ಸಮೂಹವೇ ಇದೆ ಅಂತೆಲ್ಲಾ ಹೇಳಿಕೊಂಡಿದ್ದಳು. ಆಕೆ ಹೇಳಿದ ಮಾತಿಗೂ, ಆಕೆಯ ತಂದೆ ಹೇಳಿದ ಮಾತಿಗೂ ಹೋಲಿಕೆಯಾಗುತ್ತಿದೆ. ಅಮೂಲ್ಯ ಲಿಯೋನ್ ದೇಶದ್ರೋಹದ ಹೇಳಿಕೆ ನೀಡಿರೋದ್ರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಅನ್ನೋ ಅನುಮಾನಗಳು ಮೂಡುತ್ತಿವೆ.

ಇನ್ನು ಅಮೂಲ್ಯ ದೇಶದ್ರೋಹದ ಹೇಳಿಕೆ ನೀಡೋದಕ್ಕೆ ಆಕೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದಳಾ. ಯಾಕೆಂದ್ರೆ ಆಕೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಪುಷ್ಪಿ ನೀಡುವ ಸ್ಟೇಟಸ್ ಹಾಕಿಕೊಂಡಿದ್ದಳು. ಬೆಂಗಳೂರಿನಲ್ಲಿ ನಡೆಯಲಿರೋ ಪ್ರತಿಭಟನೆಯಲ್ಲಿ ತಾನೂ ಭಾಷಣ ಮಾಡುತ್ತೇನೆ. ನೀವೂ ಬನ್ನಿ ಅಂತಾ ಜನರಿಗೆ ಆಹ್ವಾನ ಕೊಟ್ಟಿದ್ದಳು. ಒಂದೊಮ್ಮೆ ಆಕೆ ಮೊದಲೇ ಪ್ಲಾನ್ ಮಾಡಿಕೊಂಡಿದ್ದರೆ, ಆಕೆಯ ತಲೆಗೆ ದೇಶದ್ರೋಹದ ಕೃತ್ಯವೆಸಗಲು ಪ್ರಚೋದಿಸಿದ್ದು ಯಾರು ? ಕಾರ್ಯಕ್ರಮದ ಸಂಘಟಕರಿಗೂ ಆಕೆ ಇಂತಹ ಹೇಳಿಕೆ ನೀಡೋದು ಮೊದಲೇ ಗೊತ್ತಿತ್ತಾ. ಅಮೂಲ್ಯ ಸಿಎಎ ವಿರೋಧಿ ಭಾಷಣ ಮಾಡೋದು ಸಂಘಟಕರಿಗೆ ಗೊತ್ತೇ ಇಲ್ಲಾ ಅಂತಾದ್ರೆ ಆಕೆಯನ್ನು ವೇದಿಕೆ ಹತ್ತೋಕೆ ಅವಕಾಶ ಕೊಟ್ಟಿದ್ಯಾಕೆ ? ಹೀಗೆ ಹಲವು ಆಯಾಮದಡಿಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನೊಂದೆಡೆ ಅಮೂಲ್ಯ ಲಿಯೋನ್ ಗೆ ನಕ್ಸಲ್ ಸಂಘಟನೆಗಳ ಜೊತೆಗೂ ಲಿಂಕ್ ಇತ್ತಾ ಅನ್ನೋ ಅನುಮಾನ ಮೂಡುತ್ತಿದೆ. ಯಾಕೆಂದ್ರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಕುರಿತು ಹೇಳಿಕೆಯನ್ನು ನೀಡಿದ್ದಾರೆ. ಅಮೂಲ್ಯ ಲಿಯೋನ್ ಗೆ ನಕ್ಸಲ್ ಸಂಪರ್ಕವಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿಯೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ ಅಂದಿದ್ದಾರೆ. ಮೈಸೂರು, ಹುಬ್ಬಳ್ಳಿ ಇದೀಗ ಬೆಂಗಳೂರಿನಲ್ಲಿ ಪಾಕ್ ಪ್ರೇಮ ಬಹಿರಂಗವಾಗಿದೆ. ಪೊಲೀಸ್ ಇಲಾಖೆ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಯುವ ಜನರು ಪದೇ ಪದೇ ಪಾಕ್ ಪ್ರೇಮ ವ್ಯಕ್ತಪಡಿಸುತ್ತಿರೋದ್ರ ಹಿಂದೆ ಯಾರ ಕೈವಾಡವಿದೆ ಅನ್ನೋ ಬಗ್ಗೆ ತನಿಖೆ ನಡೆಯಬೇಕಿದೆ. ಈ ಕುರಿತು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ಯಾ ಅನ್ನೋ ಬಗ್ಗೆ ವಿಚಾರಣೆ ನಡೆಯಬೇಕಿದೆ.

Leave A Reply

Your email address will not be published.