ಕೊರೊನಾ ಔಷಧ ಕಂಡು ಹಿಡಿದ್ದೇನೆ ಎಂದ ಆಯುರ್ವೇದ ವೈದ್ಯನಿಗೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ವಿಶ್ವದಾದ್ಯಂತ ಕೊರೊನಾ ಸೋಂಕಿಗೆ ಔಷಧಕ್ಕಾಗಿ ಸಂಶೋಧನೆ ನಡೆಯುತ್ತಿದೆ. ಈ ನಡುವಲ್ಲೇ ಕೊರೊನಾ ಸೋಂಕಿಗೆ ಆಯುರ್ವೇದ ಔಷಧ ಕಂಡುಹಿಡಿದಿದ್ದೇನೆ ಎಂದ ಆಯುರ್ವೇದ ವೈದ್ಯರೋರ್ವರಿಗೆ ಸುಪ್ರೀಂ ಕೋರ್ಟ್ ದಂಡ ವಿಧಿಸಿದೆ.
ಹರಿಯಾಣದ ಡಾ. ಓಂಪ್ರಕಾಶ್ ಅವರು ದಂಡಕ್ಕೆ ಒಳಗಾಗಿರುವವರು. ಸಂದರ್ಶನವೊಂದರಲ್ಲಿ ಆಯುರ್ವೇದ ವೈದ್ಯ ಡಾ.ಓಂಪ್ರಕಾಶ್ ಅವರು ತಾನು ಕರೊನಾ ಸೋಂಕಿಗೆ ಔಷಧ ಕಂಡುಹಿಡಿದಿದ್ದೇನೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ಕೊರೊನಾ ವೈರಸ್ ಸೋಂಕಿಗೆ ಅಲೋಪಥಿ ಔಷಧಿ ಸಂಶೋಧನೆ ನಡೆಯುತ್ತಿದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿಕೊಂಡ್ರೆ ಕೊರೊನಾ ಸೋಂಕಿನಿಂದ ಗುಣಮುಖರಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಮಾತ್ರವಲ್ಲ ಹಲವರು ಆಯುರ್ವೇದ ಹೋಮಿಯೋಪಥಿ ಔಷಧದ ಮೊರೆ ಹೋಗುತ್ತಿದ್ದಾರೆ. ಹಲವರು ಈಗಾಗಲೇ ಔಷಧಿ ಸಂಶೋಧನೆ ಮಾಡಿದ್ದೇವೆಂದು ಹೇಳಿಕೊಂಡು ವಿವಾದವನ್ನು ಸೃಷ್ಟಿಸಿದ್ದರು.
ಇದೀಗ ಆಯುರ್ವೇದಿಕ್ ಮೆಡಿಸಿನ್ ಆಯಂಡ್ ಸರ್ಜರಿಯಲ್ಲಿ (ಬಿಎಎಂಎಸ್) ಪದವಿ ಪಡೆದಿರುವ ಡಾ. ಓಂ ಪ್ರಕಾಶ್ ತಾವು ಕಂಡುಹಿಡಿದಿರುವ ಔಷಧವನ್ನು ಕರೊನಾ ಚಿಕಿತ್ಸೆಗೆ ಬಳಸುವಂತೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗೆ ಆದೇಶ ನೀಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಇದರಿಂದ ಕೊರೊನಾ ವೈರಸ್ ಸೋಂಕು ವಾಸಿಯಾಗುತ್ತದೆ ಎಂದು ಹೇಳಿಕೊಂಡಿದ್ದರು.
ನ್ಯಾಯಮೂರ್ತಿ ಸಂಜಯ್ ಕೆ. ಕೌಲ್ ನೇತೃತ್ವದ ಪೀಠ ಆ ಅರ್ಜಿಯನ್ನು ತಿರಸ್ಕರಿಸಿದ್ದು, ಈ ರೀತಿ ಪಿಐಎಲ್ ಸಲ್ಲಿಸಿದ್ದಕ್ಕೆ ತರಾಟೆ ತೆಗೆದುಕೊಂಡಿದೆ. ಪ್ರಚಾರ ತೆಗೆದುಕೊಳ್ಳಬೇಕೆಂಬ ಕಾರಣಕ್ಕೆ ಡಾ. ಓಂಪ್ರಕಾಶ್ ಈ ರೀತಿ ಪಿಐಎಲ್ ಸಲ್ಲಿಸಿದ್ದಾರೆ ಎಂದು ಅರ್ಜಿಯನ್ನು ತಿರಸ್ಕರಿಸಿ ದಂಡ ವಿಧಿಸಿದೆ.