ಎಸ್‌ಬಿಐ ಗ್ರಾಹಕರಿಗೆ ಅಲರ್ಟ್: ನಾಲ್ಕು ದಿನ ಬ್ಯಾಂಕ್ ಸೇವೆ ಸ್ಥಗಿತ! ಬ್ಯಾಂಕ್ ಶಾಖೆಗಳು ಬಂದ್

ಎಸ್‌ಬಿಐ ಉದ್ಯೋಗಿಗಳ ಮುಷ್ಕರದ ಹಿನ್ನೆಲೆ ನಾಲ್ಕು ದಿನ ಬ್ಯಾಂಕ್ ಶಾಖೆಗಳು ಬಂದ್ ಆಗುವ ಸಾಧ್ಯತೆ ಇದೆ. ಗ್ರಾಹಕರು ಮುಂಚಿತವಾಗಿಯೇ ಅಗತ್ಯ ವ್ಯವಹಾರಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಈ ತಿಂಗಳ 25 ಮತ್ತು 26ರಂದು ಎಸ್‌ಬಿಐ ಉದ್ಯೋಗಿಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ನಾಲ್ಕು ದಿನಗಳ ಕಾಲ ಬ್ಯಾಂಕ್ ಶಾಖೆಗಳಲ್ಲಿ ಸೇವಾ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಮೇ 23ರಂದು ನಾಲ್ಕನೇ ಶನಿವಾರ ಮತ್ತು ಮೇ 24ರಂದು ಭಾನುವಾರ ಬ್ಯಾಂಕ್‌ಗಳಿಗೆ ಸಾಮಾನ್ಯ ರಜೆ ಇರುವುದರಿಂದ, ಅದರ ನಂತರ 25 ಹಾಗೂ 26ರಂದು ಮುಷ್ಕರ ನಡೆಯಲಿದೆ. ಇದರಿಂದ ಮೇ 23ರಿಂದ 26ರವರೆಗೆ ನಿರಂತರವಾಗಿ ಬ್ಯಾಂಕ್ ಶಾಖೆಗಳು ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗಬಹುದು.

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್‌ಬಿಐಗೆ ಕೋಟ್ಯಂತರ ಗ್ರಾಹಕರು ಇದ್ದಾರೆ. ಹೀಗಾಗಿ ಶಾಖೆ ಆಧಾರಿತ ಸೇವೆಗಳಾದ ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್, ನಗದು ವ್ಯವಹಾರ ಹಾಗೂ ಸಾಲ ಸಂಬಂಧಿತ ದಾಖಲೆ ಪ್ರಕ್ರಿಯೆಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ.

ಉದ್ಯೋಗಿಗಳ ಸಂಘಟನೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಮುಂದಾಗಿದೆ. ಸಿಬ್ಬಂದಿ ಕೊರತೆ ಹೆಚ್ಚುತ್ತಿರುವುದರಿಂದ ಹೊಸ ನೇಮಕಾತಿ ಮಾಡಬೇಕು, ವೇತನ ವ್ಯತ್ಯಾಸ ಸರಿಪಡಿಸಬೇಕು ಮತ್ತು ಕೆಲಸದ ಪರಿಸ್ಥಿತಿ ಸುಧಾರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದರ ಜೊತೆಗೆ ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವುದು, ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸುವುದು ಹಾಗೂ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂಬ ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ. ಉತ್ತಮ ಸೇವಾ ನಿಯಮಗಳು ಮತ್ತು ಕರಿಯರ್ ಅಭಿವೃದ್ಧಿಗೆ ಅವಕಾಶ ಕಲ್ಪಿಸಬೇಕು ಎಂಬುದು ಉದ್ಯೋಗಿಗಳ ಮತ್ತೊಂದು ಆಗ್ರಹವಾಗಿದೆ.

ಬ್ಯಾಂಕ್ ಶಾಖೆಗಳಲ್ಲಿ ವ್ಯವಹಾರ ನಡೆಸುವ ಗ್ರಾಹಕರು ಮುಂಚಿತವಾಗಿ ತಮ್ಮ ಅಗತ್ಯ ಕೆಲಸಗಳನ್ನು ಮುಗಿಸಿಕೊಳ್ಳುವುದು ಒಳಿತು ಎಂದು ಬ್ಯಾಂಕ್ ವಲಯ ಸಲಹೆ ನೀಡಿದೆ. ವಿಶೇಷವಾಗಿ ಸಾಲ ದಾಖಲೆಗಳು, ಡಿಮ್ಯಾಂಡ್ ಡ್ರಾಫ್ಟ್ ಮತ್ತು ದೊಡ್ಡ ಮೊತ್ತದ ನಗದು ವ್ಯವಹಾರಗಳಿಗೆ ಮುನ್ನೆಚ್ಚರಿಕೆ ಅಗತ್ಯವಾಗಿದೆ.

ಆದರೆ ಗ್ರಾಹಕರಿಗೆ ಸ್ವಲ್ಪ ನೆಮ್ಮದಿ ನೀಡುವ ಸಂಗತಿಯೆಂದರೆ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಮತ್ತು ಎಟಿಎಂ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಡಿಜಿಟಲ್ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ತಿಳಿಸಲಾಗಿದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories