ಶಬರಿಮಲೆ ಯಾತ್ರೆಯಿಂದ ವಾಪಸ್ಸಾದ ದಿನವೇ ಪತ್ನಿಯನ್ನು ಕೊಂದ ಪಾಪಿ ಪತಿ
ಹಾಸನ: ಶಬರಿಮಲೆ ಯಾತ್ರೆ ಮುಗಿಸಿ ಬಂದ ದಿನವೇ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆಗೈದ ದಾರುಣ ಘಟನೆಯು ಹಾಸನ ಜಿಲ್ಲೆ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ಸಂಭವಿಸಿದೆ. ಜನವರಿ 10ರಂದು ಈ ಘಟನೆ ಸಂಭವಿಸಿದ್ದು ಪತ್ನಿ 40 ವರ್ಷದ ರಾಧಾಳನ್ನು ಕೊಂದು ಯಗಚಿ ನದಿಗೆ ಎಸೆದಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎರಡನೇ ಮದುವೆಯಾಗಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ರಾಧಾ ಪತಿ ಕುಮಾರ್ ಈ ಕೃತ್ಯ ಎಸಗಿದ್ದಾನೆ ಎನ್ನುವುದು ರಾಧಾ ಕುಟುಂಬಸ್ಥರ ಆರೋಪವಾಗಿದೆ. ಕುಮಾರ್ಗೆ ಈ ಕೃತ್ಯ ಎಸಗಲು ಆತನ ಕುಟುಂಬಸ್ಥರೂ ಸಾಥ್ ನೀಡಿದ್ದಾರೆ ಎಂದು ರಾಧಾ ಮನೆಯವರು ಆರೋಪ ಮಾಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ರಾಧಾ ಪತಿಯನ್ನು ಬಿಟ್ಟು ಬೇರೆ ಮನೆಯಲ್ಲಿ ವಾಸವಿದ್ದರು. ಜನವರಿ ಮೊದಲ ವಾರದಲ್ಲಿ ಕುಮಾರ್ ಶಬರಿಮಲೆಗೆ ತೆರಳಿದ್ದ ಎನ್ನಲಾಗಿದೆ. ಇರುಮುಡಿ ಕಟ್ಟುವ ಸಂದರ್ಭದಲ್ಲಿ ಪತ್ನಿ ಸ್ಥಾನದಲ್ಲಿ ರಾಧಾ ಮಾಡಬೇಕಿದ್ದ ಪೂಜೆಯನ್ನು ಬೇರೊಬ್ಬ ಮಹಿಳೆ ಮಾಡಿರುವ ಬಗ್ಗೆ ರಾಧಾಗೆ ಮಾಹಿತಿ ದೊರಕಿತ್ತು .
ಇದನ್ನೇ ಪ್ರಶ್ನೆ ಮಾಡಲೆಂದು ರಾಧಾ ರಾತ್ರಿ ಯಡೂರಿಗೆ ಆಗಮಿಸಿದ್ದಳು ಎನ್ನಲಾಗಿದೆ. ಅದೇ ದಿನದ ಶಬರಿಮಲೆಯಿಂದ ವಾಪಸ್ಸಾಗಿದ್ದ ಕುಮಾರ್ ರಾಧಾಳನ್ನು ಕೊಂದು ಹಾಸನ ತಾಲೂಕಿನ ಕಂದಲಿ ಬಳಿಯ ಯಗಚಿ ನದಿಯಲ್ಲಿ ಆಕೆಯ ಶವವನ್ನು ಎಸೆದಿದ್ದ.
ಇದನ್ನೂ ಓದಿ: ಸಕಲೇಶಪುರ : ಆನೆ ದಾಳಿ; ಕೂಲಿ ಕಾರ್ಮಿಕ ಮಹಿಳೆ ಸಾವು
ಈ ಬಗ್ಗೆ ನಿನ್ನೆ ತಾನೇ ಪೊಲೀಸರಿಗೆ ಕುಮಾರ್ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಇಂದು ಯಗಚಿ ನದಿಯಿಂದ ರಾಧಾಳ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ರಾಧಾಳ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.



