ಗೃಹ ಕಲಹ ಹಲ್ಲೆ: ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು
ಉಡುಪಿ: ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ಗುಮ್ಮೆಟ್ಟು ನಿವಾಸಿ ಶ್ರೀಮತಿ ಗೀತಾ ಅವರು ಪತಿ ಸುನೀಲ್ ಕುಮಾರ್ ಅವರಿಂದ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರೋಪಿ ಸುನೀಲ್ ಕುಮಾರ್ ಪೊಲೀಸ್ ವಶಕ್ಕೆ.
ಜನವರಿ 27ರಂದು ಬೆಳಿಗ್ಗೆ ಗೃಹ ಕಲಹದ ವೇಳೆ ಗೀತಾ ಮತ್ತು ಅವರ ಪತಿ ನಡುವೆ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ಸುನೀಲ್ ಕುಮಾರ್ ಅವರು ಗೀತಾ ಅವರ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಗೀತಾ ಅವರನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ವೈದ್ಯರ ಮಾಹಿತಿ ಪ್ರಕಾರ ಗೀತಾ ಅವರ ಎದೆ ಮೂಳೆಗಳು ಮುರಿದು, ಹೊಟ್ಟೆಯ ಒಳಭಾಗಕ್ಕೂ ತೀವ್ರ ಗಾಯಗಳಾಗಿದ್ದವು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 2ರಂದು ಬೆಳಗಿನ ಜಾವ ಗೀತಾ ಅವರು ಮೃತಪಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸರು ಆರೋಪಿ ಸುನೀಲ್ ಕುಮಾರ್ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಹಿಳೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೊಲೆ ಪ್ರಕರಣವಾಗಿ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.



