ಸೈಬರ್​ ವಂಚಕರಿಂದ ನಿರಂತರ 3 ದಿನಗಳ ವಿಡಿಯೋ ಕಾಲ್​ : ವೃದ್ಧ ದಂಪತಿಗೆ ಪೊಲೀಸರ ಸೋಗಿನಲ್ಲಿ 50 ಲಕ್ಷ ರೂ. ಪಂಗನಾಮ

Cyber fraud: ನಿವೃತ್ತ ಬ್ಯಾಂಕರ್​ ಹಾಗೂ ಅವರ ಪತ್ನಿಯನ್ನು ಸೈಬರ್​ ಅಧಿಕಾರಿಗಳಂತೆ ನಟಿಸಿ ಬರೋಬ್ಬರಿ ಮೂರು ದಿನಗಳ ಕಾಲ ವಿಡಿಯೋ ಕಾಲ್​ನಲ್ಲಿಯೇ ಇರುವಂತೆ ಒತ್ತಾಯಿಸಿ 50 ಲಕ್ಷ ರೂಪಾಯಿಗಳನ್ನು ವಂಚಿಸಿದ ಆಘಾತಕಾರಿ ಘಟನೆಯು ಮುಂಬೈನಲ್ಲಿ ಸಂಭವಿಸಿದೆ. ಮೋಸಕ್ಕೊಳಗಾದ ವೃದ್ಧ ಈ ಸಂಬಂಧ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಸೆಪ್ಟೆಂಬರ್​ 11ರಂದು ನಿವೃತ್ತ ವ್ಯಕ್ತಿಗೆ ನಾಸಿಕ್​ ಪೊಲೀಸರು ಎಂದು ಹೇಳಿಕೊಂಡು ವಾಟ್ಸಾಪ್​ ಕರೆಗಳು ಬಂದಿದ್ದವು. ಪೊಲೀಸ್​ ಅಧಿಕಾರಿಯಂತೆ ನಟಿಸಿದ ವ್ಯಕ್ತಿಯು ನಿಮ್ಮ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಬೆದರಿಸಿದ್ದಾರೆ. ಅಲ್ಲದೇ ಈ ಸಂಬಂಧ ನಕಲಿ ಎಫ್​ಐಆರ್​ನ್ನೂ ತೋರಿಸಿದ್ದಾರೆ.

ಬಳಿಕ ಮತ್ತೊಬ್ಬ ವ್ಯಕ್ತಿಯು ಕರೆ ಮಾಡಿ ತಾನು ರಾಷ್ಟ್ರೀಯ ತನಿಖಾ ಸಂಸ್ಥೆಯ ಐಪಿಎಸ್​ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದು ನಿಮ್ಮ ಮೇಲೆ ನಿಗಾ ಇಡಲು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ನಿರಂತರ ಮೂರು ದಿನಗಳ ಕಾಲ ವೃದ್ಧ ದಂಪತಿಯನ್ನು ವಿಡಿಯೋ ಕಾಲ್​ನಲ್ಲಿ ಇರಿಸಿಕೊಂಡಿದ್ದರು. ಈ ಮೂಲಕ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಷಡ್ಯಂತ್ರ ವಂಚಕರಾಗಿತ್ತು. ಇದರಲ್ಲಿ ಯಶಸ್ವಿಯಾದ ವಂಚಕರು ವೃದ್ಧ ದಂಪತಿಗಳನ್ನು ಗೃಹ ಬಂಧನದಲ್ಲಿರಿಸಿಕೊಂಡಿದ್ದಾರೆ.

Also Read: ರಕ್ಷಣೆ ನೀಡಬೇಕಾದ ಆರಕ್ಷಕಿಯಿಂದಲೇ ಕಳ್ಳತನ : ಪ್ರಾಣ ಸ್ನೇಹಿತೆ ನಿವಾಸದಿಂದಲೇ ಹಣ ಎಗರಿಸಿದ ಚಾಲಾಕಿ ಪೊಲೀಸ್​

ನಕಲಿ ವಿಚಾರಣೆಯ ನಾಟಕವಾಡಿದ ವಂಚಕರು ದಂಪತಿಗಳಿಂದ ಬ್ಯಾಂಕ್​ ಖಾತೆಗಳು ಹಾಗೂ ಸ್ಥಿರ ಠೇವಣಿಗಳ ವಿವರಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿರುವ ಹಣವನ್ನು ಪರಿಶೀಲಿಸುತ್ತೇವೆ ಎಂದು ಹೇಳಿ ದಂಪತಿಯಿಂದ ಪಾಸ್​ವರ್ಡ್​ ಹಾಗೂ ಒಟಿಪಿಗಳನ್ನು ಪಡೆದುಕೊಂಡು 50 ಲಕ್ಷ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಬ್ಯಾಂಕ್​ ಖಾತೆಯಿಂದ ಹಣ ವರ್ಗಾವಣೆಯಾಗುತ್ತಿದ್ದಂತೆಯೇ ಕರೆಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡವು ಎಂದು ನಿವೃತ್ತ ಬ್ಯಾಂಕರ್​ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆಯೇ ತನಿಖೆ ಆರಂಭಿಸಿದ ಉತ್ತರ ವಲಯ ಸೈಬರ್​ ಪೊಲೀಸರು ವಂಚನೆಗೊಳಗಾದ ಹಣದ ಪೈಕಿ 29.5 ಲಕ್ಷ ರೂಪಾಯಿಯನ್ನು ಆರೋಪಿಗಳಿಂದ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಈ ಹಣವು ಥಾಣೆ ಜಿಲ್ಲೆಯ ಉಲ್ಲಾಸ ನಗರದ ನಿವಾಸಿ ರವಿ ಆನಂದ್​ ಎಂಬಾತ ವಂಚಿಸಿ ಪಡೆದುಕೊಂಡಿದ್ದ ಎನ್ನಲಾಗಿದೆ.

ಆರೋಪಿ ರವಿ ಆನಂದನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಇತ ತಾನೂ ಸೈಬರ್ ವಂಚಕರಿಗೆ ತನ್ನ ಖಾತೆಯನ್ನು ಬಾಡಿಗೆಗೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈತ ನೀಡಿದ ಮಾಹಿತಿ ಆಧರಿಸಿ ಮತ್ತೊಬ್ಬ ಆರೋಪಿ ಚಂದ್ರಕಾಂತ್​ ಜಾದವ್​ ಎಂಬಾತನನ್ನು ಬಂಧಿಸಲಾಗಿದೆ. ಇವರ ಖಾತೆಗಳನ್ನು ಇದೇ ರೀತಿಯ ಇನ್ನೂ 7 ಸೈಬರ್ ವಂಚನೆಗಳಲ್ಲಿ ಬಳಸಲಾಗಿದೆ ಎಂದು ತಿಳಿದುಬಂದಿದೆ.

Also Read: ವಿದೇಶದಲ್ಲಿ ಪುರುಷನ ಲೈಂಗಿಕ ದೌರ್ಜನ್ಯವೆಸಗಿ ಜೈಲುಪಾಲಾದ ಭಾರತೀಯ ವ್ಯಕ್ತಿ

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories