Eta Irrigation Scheme: ಏತ ನೀರಾವರಿ ಯೋಜನೆ ವಿದ್ಯುತ್ ಸಂಪರ್ಕ ಕಡಿತ: ಸರ್ಕಾರದ ವಿರುದ್ಧ ವಿ. ಸುನಿಲ್ ಕುಮಾರ್ ವಾಗ್ದಾಳಿ
ಉಡುಪಿ: Eta Irrigation Scheme: ಕಾರ್ಕಳ–ಅಜೆಕಾರು ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ವಿದ್ಯುತ್ ಸಂಪರ್ಕವನ್ನು ಬಾಕಿ ನೆಪದಲ್ಲಿ ಸ್ಥಗಿತಗೊಳಿಸಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ವಿ. ಸುನಿಲ್ ಕುಮಾರ್, ಇದನ್ನು ರೈತ ವಿರೋಧಿ ಹಾಗೂ ಜನವಿರೋಧಿ ನಿರ್ಧಾರವೆಂದು ಖಂಡಿಸಿದ್ದಾರೆ.
ಆಳುವ ಸರ್ಕಾರ ದಿವಾಳಿಯಾದಾಗ ಅಥವಾ ದೃಷ್ಟಿ ಹಾಗೂ ಶ್ರವಣ ದೋಷ ಪೀಡಿತವಾದಾಗ ಮಾತ್ರ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ರಾಜ್ಯ ಕಾಂಗ್ರೆಸ್ ಸರ್ಕಾರ ತುಳಿಯುತ್ತಿರುವ ದುಶಾಸನ ಆಡಳಿತಕ್ಕೆ ಕಾರ್ಕಳ–ಅಜೆಕಾರು ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ವಿದ್ಯುತ್ ಸಂಪರ್ಕ ಕಡಿತವೇ ಸ್ಪಷ್ಟ ಉದಾಹರಣೆ ಎಂದು ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಆರೋಪಿಸಿದ್ದಾರೆ.
ಯೋಜನೆಯ ಉದ್ದೇಶವೇ ನೀರಾವರಿ ಹಾಗೂ ರೈತರ ಕಲ್ಯಾಣವಾಗಿದ್ದು, ಈಗಾಗಲೇ ಬೇಸಿಗೆ ಪ್ರಾರಂಭವಾಗಿರುವ ಸಂದರ್ಭದಲ್ಲಿ ನೀರಿನ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ 2 ಕೋಟಿ ರೂ.ಗೂ ಅಧಿಕ ವಿದ್ಯುತ್ ಬಾಕಿ ನೆಪದಲ್ಲಿ ಸಂಪರ್ಕ ಕಡಿತ ಮಾಡಿರುವುದು ಅಸಮಂಜಸ ಹಾಗೂ ರೈತ ವಿರೋಧಿ ಕ್ರಮ ಎಂದು ಅವರು ಹೇಳಿದರು.
Also Read: ಉಡುಪಿ: ಪೊಲೀಸ್ ಮ್ಯಾರಥಾನ್ ವೇಳೆ ಕುಸಿದು ಬಿದ್ದು ಕುಂದಾಪುರ ಗ್ರಾಮಾಂತರ ಠಾಣೆಯ ಎಸ್ಐ ಸಾವು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂಧನ ಇಲಾಖೆಯ ನಿರ್ವಹಣೆ ಹದಗೆಟ್ಟಿದೆ ಎಂದು ಆರೋಪಿಸಿದ ಅವರು, ಮೆಸ್ಕಾಂ ಅಧಿಕಾರಿಗಳು ಪ್ಯೂಜ್ ತೆಗೆದು ಸಂಪರ್ಕ ಕಡಿತಗೊಳಿಸಿ ಮೂರು ದಿನ ಕಳೆದರೂ ಸರ್ಕಾರ ಮೌನವಾಗಿದೆ. ಸರ್ಕಾರದ ಈ ಕ್ರಮವನ್ನು ಉಗ್ರವಾಗಿ ಖಂಡಿಸುತ್ತೇನೆ. ಅನ್ನದಾತರ ಬದುಕಿನೊಂದಿಗೆ ಆಟವಾಡಬೇಡಿ, ಎಂದು ಸುನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.



