Yakshagana: ಯಕ್ಷಗಾನ ಒಂದು ಶ್ರೀಮಂತ ಕಲೆ – ಕೃಷ್ಣ ಪೂಜಾರಿ ಚಕ್ರಮಕ್ಕಿ
ಕುಂದಾಪುರ : ಸರ್ವಾಂಗೀಣ ಕಲೆ ಎನಿಸಿರುವ ಯಕ್ಷಗಾನ ಒಂದು ಶ್ರೀಮಂತ ಕಲೆ. ಇಂದಿನ ಮಕ್ಕಳು ಯಕ್ಷಗಾನವನ್ನು ಕರಗತ ಮಾಡಿಕೊಂಡು ಭವಿಷ್ಯದ ಉತ್ತಮ ಪ್ರಜೆಯಾಗಬೇಕು ಎಂದು ಯಕ್ಷ ಅಭಿಮಾನಿ ಕೃಷ್ಣ ಪೂಜಾರಿ ಚಕ್ರಮಕ್ಕಿ ಅಭಿಪ್ರಾಯಪಟ್ಟಿದ್ದಾರೆ.
ಸ್ವರ್ಣನೂಪುರ ಯಕ್ಷಗಾನ(yakshagana) ಮಂಡಳಿ ಕುಂದಾಪುರ ಇದರ ವತಿಯಿಂದ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಆಯೋಜಿಸಿರುವ ಹೆಜ್ಜೆಗೆಜ್ಜೆ ತರಗತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕರಾವಳಿಯ ಶ್ರೇಷ್ಠ ಕಲೆಯಾದ ಯಕ್ಷಗಾನವನ್ನು ಪ್ರಸ್ತುತ ಕಾಲಘಟ್ಟಮಾನದ ವಿದ್ಯಾರ್ಥಿಗಳು ಕಲಿತು ತಾವು ಕರಾವಳಿ ಸಂಸ್ಕೃತಿಯತ್ತ ಚಿಂತನೆಯನ್ನು ನಡೆಸಬೇಕು ಮತ್ತು ಪುರಾಣ ಕಥೆಗಳ ತಿಳುವಳಿಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.

ಮುಖ್ಯ ಅತಿಥಿಗಳಾದ ಮಂಜು ಬಿಲ್ಲವ ಅವರು ಮಾತನಾಡಿ, ವಿದ್ಯಾರ್ಥಿಗಳನ್ನು ಎಳವೆಯಿಂದಲೇ ಯಕ್ಷಗಾನದತ್ತ ಸೆಳೆಯುವಂತೆ ಮಾಡುವ ದೊಡ್ಡ ಕಾರ್ಯವನ್ನು ಸ್ವರ್ಣನೂಪುರ ಸಂಸ್ಥೆ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾದ ಹವ್ಯಾಸಿ ಭಾಗವತ ರಾಜೇಶ್ ಕರ್ಕೇರ ಅವರು ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಸೂಕ್ತವಾದ ಪ್ರತಿಭೆಯನ್ನು ಹೊರತೆಗೆಯಲು ಯಕ್ಷಗಾನ ಒಂದು ಸುಂದರ ವೇದಿಕೆ. ಅಂತಹ ವೇದಿಕೆಗಳನ್ನು ಸ್ವರ್ಣನೂಪುರ ಸಂಸ್ಥೆಯು ಆಸಕ್ತ ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಡುವಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಬ್ರಹ್ಮಾವರ : ಅಕ್ರಮ ಮರಳುಗಾರಿಕೆ, ಓರ್ವ ಅರೆಸ್ಟ್
ಸ್ವರ್ಣನೂಪುರ ಯಕ್ಷಗಾನ ಮಂಡಳಿ ಕುಂದಾಪುರ ಇದರ ವ್ಯವಸ್ಥಾಪಕರು ಹಾಗೂ ಸಿವಿಲ್ ಇಂಜಿನಿಯರ್ ಆಗಿರುವ ಗಣೇಶ್ ಗುನಗ, ಸ್ವರ್ಣನೂಪುರ ಸಂಸ್ಥೆಯ ಗುರುಗಳಾದ ವಿಘ್ನೇಶ್ ದೇವಾಡಿಗ ಹರ್ತಟ್ಟು, ಹವ್ಯಾಸಿ ಮದ್ದಲೆವಾದಕರಾದ ವಿಶ್ವನಾಥ್ ಕುಲಾಲ್ ಐರೋಡಿ, ಪೋಷಕರಾದ ಶ್ರೀ ಶೇಖರ್ ಪೂಜಾರಿ ಹುಣಿಸೆಮಕ್ಕಿ ಉಪಸ್ಥಿತರಿದ್ದರು

ಹವ್ಯಾಸಿ ಯಕ್ಷಗಾನ ಕಲಾವಿದರನ್ನು ಪ್ರೇರೇಪಿಸುವ ಸಲುವಾಗಿ ಅದ್ವಿತೀಯ ಹವ್ಯಾಸಿ ಕಲಾವಿದರಾದ ಅಕ್ಷಯ್ ಕೋಟೇಶ್ವರ ಮತ್ತು ಶೋಭಿತ್ ಐರೋಡಿ ಇವರನ್ನು ಸನ್ಮಾನಿಸಲಾಯಿತು.
ಕುಮಾರಿ ಮನಸ್ವಿ ಪ್ರಾರ್ಥನೆಯ ಜೊತೆಗೆ ಸ್ವಾಗತಿಸಿದರು, ಗೋಪಾಲ್ ಪೂಜಾರಿ ವಂದಿಸಿದರು. ಹವ್ಯಾಸಿ ಭಾಗವತರಾದ ಕುಮಾರಿ ಪೂಜಾ ಆಚಾರ್ಯ ತೆಕಟ್ಟೆ ಕಾರ್ಯಕ್ರಮ ನಿರೂಪಿಸಿದರು..
ಇದನ್ನೂ ಓದಿ : ಮಣಿಪಾಲ : ಕಾಲೇಜು ವಿದ್ಯಾರ್ಥಿಗಳ ಮಾರಾಮಾರಿ : ಓರ್ವ ಗಂಭೀರ



