ಮುಡಾ ನಿವೇಶನ ಹಂಚಿಕೆ ಹಗರಣ : ಸಿಎಂ ಸಿದ್ದರಾಮಯ್ಯ ದೋಷಮುಕ್ತ..!
ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಎಬ್ಬಿಸಿದ್ದ ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಇದೀಗ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ದೊರಕಿದೆ. ತನಿಖೆ ಸಂಸ್ಥೆ ಸಲ್ಲಿಸಿದ ಬಿ ರಿಪೋರ್ಟ್ನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸುವ ಮೂಲಕ ಸಿದ್ದರಾಮಯ್ಯಗೆ ಕ್ಲೀನ್ಚಿಟ್ ನೀಡಿದೆ. ಈ ಮೂಲಕ ಕಾನೂನು ಹೋರಾಟದಲ್ಲಿ ಬಹುದೊಡ್ಡ ಜಯ ಸಾಧಿಸಿದ ಸಿದ್ದರಾಮಯ್ಯ ಕೊನೆಗೂ ಕಳಂಕಮುಕ್ತರಾಗಿದ್ದಾರೆ .
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ. ಪಾರ್ವತಿ , ಮಲ್ಲಿಕಾರ್ಜುನ ಸ್ವಾಮಿ, ದೇವರಾಜು ಅವರು ದೋಷಮುಕ್ತರು ಎಂದು ಕೋರ್ಟ್ ಆದೇಶ ನೀಡಿದ್ದು, ಉಳಿದ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸುವಂತೆ ಸೂಚನೆ ನೀಡಿದೆ.
ಏನಿದು ಮುಡಾ ಹಗರಣ ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ಎಸಗಿದೆ ಎಂಬ ಆರೋಪ ಎದುರಾಗಿತ್ತು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ನಿಯಮ ಬಾಹಿರವಾಗಿ 14 ನಿವೇಶನಗಳನ್ನು ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸ್ನೇಹಮಯಿ ಕೃಷ್ಣ ಕಾನೂನು ಹೋರಾಟ ನಡೆಸುತ್ತಿದ್ದರು.
ಈ ಸಂಬಂಧ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 2024ರ ಆಗಸ್ಟ್ 8ರಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು.
ಮುಡಾ ಹಗರಣವು ಸಿಎಂ ಸಿದ್ದರಾಮಯ್ಯರ ರಾಜಕೀಯ ಇಮೇಜ್ಗೆ ಅಂಟಿದ್ದ ಬಹುದೊಡ್ಡ ಕಳಂಕವಾಗಿತ್ತು. ಆದರೆ ಇದೀಗ ಮುಡಾ ಸುಳಿಯಿಂದ ಬಚಾವ್ ಆಗಿರುವ ಸಿಎಂ ಸಿದ್ದರಾಮಯ್ಯರ ರಾಜಕೀಯ ಜೀವನಕ್ಕೆ ಇದೊಂದು ಬಹುದೊಡ್ಡ ವರದಾನವಾಗಿದೆ. ಆದರೆ ಈ ತೀರ್ಪಿನ ವಿರುದ್ಧ ವಿಪಕ್ಷಗಳ ನಡೆ ಏನಿರಬಹುದು ಎಂಬುದು ಕುತೂಹಲಕಾರಿಯಾಗಿದ್ದು ಮೇಲ್ಮನವಿ ಸಲ್ಲಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.



