ಅದಾನಿ ವಿರುದ್ಧ 1,400 ಕೋಟಿ ದಂಡದ ತೀರ್ಪು: ಅದೇ ದಿನ ನ್ಯಾಯಾಧೀಶರ ವರ್ಗಾವಣೆ!

ಜೈಪುರ: ರಾಜಸ್ಥಾನದ ವಾಣಿಜ್ಯ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ದಿನೇಶ್ ಕುಮಾರ್ ಗುಪ್ತಾ ಅವರು (Rajasthan judge) ಅದಾನಿ ಸಮೂಹದ ಉದ್ಯಮವೊಂದಕ್ಕೆ ಸಂಬಂಧಿಸಿದ ವಿವಾದದಲ್ಲಿ ಸರ್ಕಾರದ ಪರವಾಗಿ ತೀರ್ಪು ನೀಡಿದ ಕೆಲವೇ ಗಂಟೆಗಳಲ್ಲಿ ಅವರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಈ ಘಟನೆಯು ಈಗ ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಪ್ರಕರಣದ ಹಿನ್ನೆಲೆ ಏನು?
ಅದಾನಿ ಗ್ರೂಪ್ ನೇತೃತ್ವದ ಜಂಟಿ ಉದ್ಯಮವು ರಾಜಸ್ಥಾನ ಸರ್ಕಾರದ ಒಡೆತನದ ವಿದ್ಯುತ್ ಕಂಪನಿಯಿಂದ (RRVUNL) ಕಲ್ಲಿದ್ದಲು ಸಾಗಾಣಿಕೆ ವೆಚ್ಚದ ಹೆಸರಿನಲ್ಲಿ ಅಕ್ರಮವಾಗಿ ₹1,400 ಕೋಟಿಗೂ ಹೆಚ್ಚು ಹಣವನ್ನು ವಸೂಲಿ ಮಾಡಿದೆ ಎಂಬ ಆರೋಪವಿತ್ತು.

ಮೂಲ ಒಪ್ಪಂದದ ಪ್ರಕಾರ ಕಲ್ಲಿದ್ದಲನ್ನು ರೈಲು ಮಾರ್ಗದ ಮೂಲಕವೇ ಸಾಗಿಸಬೇಕಿತ್ತು. ಆದರೆ, ಕಂಪನಿಯು ರಸ್ತೆ ಮಾರ್ಗದ ಮೂಲಕ ಸಾಗಿಸಿ, ಅದಕ್ಕೆ ಹೆಚ್ಚಿನ ವೆಚ್ಚವನ್ನು ಸರ್ಕಾರದ ಕಂಪನಿಯಿಂದ ಭರಿಸಿಕೊಂಡಿತ್ತು.

ನ್ಯಾಯಾಲಯದ ತೀರ್ಪು: ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ದಿನೇಶ್ ಕುಮಾರ್ ಗುಪ್ತಾ ಅವರು, ಅದಾನಿ ನೇತೃತ್ವದ ಕಂಪನಿಯು ನಿಯಮ ಉಲ್ಲಂಘಿಸಿ ಲಾಭ ಮಾಡಿಕೊಂಡಿದೆ ಎಂದು ತೀರ್ಪು ನೀಡಿದರು. ಅಲ್ಲದೆ, ಕಂಪನಿಗೆ ₹50 ಲಕ್ಷ ದಂಡ ವಿಧಿಸಿದ್ದಲ್ಲದೆ, ಈ ಇಡೀ ಒಪ್ಪಂದದ ಬಗ್ಗೆ CAG (ಮಹಾಲೆಕ್ಕಪಾಲರು) ತನಿಖೆ ನಡೆಸುವಂತೆ ಆದೇಶಿಸಿದ್ದರು.

ವರ್ಗಾವಣೆಯ ವಿವಾದ:
ವಿಶೇಷವೆಂದರೆ, ಜುಲೈ 5ರಂದು ನ್ಯಾಯಾಧೀಶರು ಈ ತೀರ್ಪನ್ನು ಪ್ರಕಟಿಸಿದ್ದರು. ಅದೇ ದಿನ ಸಂಜೆ ರಾಜಸ್ಥಾನ ಹೈಕೋರ್ಟ್ ಅವರನ್ನು ಜೈಪುರದಿಂದ 200 ಕಿ.ಮೀ ದೂರವಿರುವ ಬಿಯಾವರ್ (Beawar) ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತು. ರಾಜ್ಯ ಸರ್ಕಾರದ ಕಾನೂನು ಇಲಾಖೆಯು ಇವರನ್ನು ಹುದ್ದೆಯಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಈ ವರ್ಗಾವಣೆ ನಡೆದಿದೆ.

ನ್ಯಾಯಾಧೀಶರು ದೊಡ್ಡ ಕಾರ್ಪೊರೇಟ್ ಸಂಸ್ಥೆಯ ವಿರುದ್ಧ ಕಠಿಣ ತೀರ್ಪು ನೀಡಿದ ತಕ್ಷಣವೇ ಈ ಕ್ರಮ ಜರುಗಿಸಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ‘ಸ್ಕ್ರೋಲ್’ (Scroll.in) ವರದಿ ಮಾಡಿದೆ.

ಇದನ್ನೂ ಓದಿ: ಕಂದಾಯ ಜಮೀನುಗಳಲ್ಲಿ ಮನೆ ಹೊಂದಿದವರಿಗೆ ಗುಡ್​ ನ್ಯೂಸ್ : ರಾಜ್ಯ ಸರ್ಕಾರದಿಂದ ಹಕ್ಕುಪತ್ರದ ಗ್ಯಾರಂಟಿ ..!


ಈ ತೀರ್ಪು ಹೊರಬಂದ ಎರಡು ವಾರಗಳ ನಂತರ, ರಾಜಸ್ಥಾನ ಹೈಕೋರ್ಟ್ ಅದಾನಿ ಕಂಪನಿಗೆ ವಿಧಿಸಲಾಗಿದ್ದ ದಂಡ ಮತ್ತು CAG ತನಿಖೆಯ ಆದೇಶಕ್ಕೆ ತಡೆಯಾಜ್ಞೆ (Stay) ನೀಡಿದೆ. ಸದ್ಯ ಈ ಪ್ರಕರಣದ ಮುಂದಿನ ವಿಚಾರಣೆ 2026ರ ಜನವರಿ ಕೊನೆಯ ವಾರದಲ್ಲಿ ನಡೆಯಲಿದೆ. ಒಬ್ಬ ನ್ಯಾಯಾಧೀಶರು ಪ್ರಭಾವಿ ಕಂಪನಿಗಳ ವಿರುದ್ಧ ತೀರ್ಪು ನೀಡಿದಾಗ ಅವರ ಮೇಲೆ ಆಡಳಿತಾತ್ಮಕ ಒತ್ತಡ ಹೇರಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಎತ್ತಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories