Mysore: ಐಷಾರಾಮಿ ಬಂಗಲೆಯಲ್ಲಿ ಹೆಣ್ಣು ಭ್ರೂಣ ಲಿಂಗ ಹತ್ಯೆ : ಆರೋಪಿಗಳು ಅಂದರ್
Mysore : ಐಷಾರಾಮಿ ಬಂಗಲೆಯಲ್ಲಿ ಭ್ರೂಣಲಿಂಗವನ್ನು ಪತ್ತೆ ಹಚ್ಚಿ, ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ದಂಧೆ ಬಯಲಿಗೆ ಬಂದಿದೆ. ಅರಮನೆ ನಗರಿ ಮೈಸೂರಿನಲ್ಲಿ ಹುನಗನಹಳ್ಳಿಯಲ್ಲಿ ಭ್ರೂಣಲಿಂಗ ಪತ್ತೆ ಹಚ್ಚಿ, ಹತ್ಯೆ ಮಾಡುವ ಹೈಟೆಕ್ ಜಾಲ ಬೇಧಿಸುವಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿ ಆಗಿದ್ದಾರೆ.
ಮೈಸೂರಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ದಂಧೆ ನಡೆಯುತ್ತಿದ್ದ ಐಷಾರಾಮಿ ಮನೆಯಲ್ಲಿದ್ದ 3 ಲಕ್ಷ ರೂಪಾಯಿ ನಗದು ಹಾಗೂ ನರ್ಸ್ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಹಲವು ಸಮಯದಿಂದಲೂ ಇಲ್ಲಿನ ಐಷಾರಾಮಿ ಮನೆಯಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತಿತ್ತು. ಭ್ರೂಣಲಿಂಗ ಪತ್ತೆಗೆ 25 ಸಾವಿರ ರೂಪಾಯಿ ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡಲು 30 ಸಾವರ ರೂಪಾಯಿ ವಸೂಲಿ ಮಾಡುತ್ತಿದ್ದರು.
ಈ ದಂಧೆಯಲ್ಲಿ ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಮ್ನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಇದೇ ದಂಧೆಯನ್ನು ಬಳಸಿಕೊಂಡು ಲಕ್ಷಾಂತರ ರೂಪಾಯಿ ವಹಿವಾಟು ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭ್ರೂಣ ಹತ್ಯೆಗೆ ಬೇಕಾದ ಕಿಟ್ ಹಾಗೂ ಔಷಧಗಳನ್ನು ವಶಕ್ಕೆ ಪಡೆಯಲಾಗಿದೆ. ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಡಿಡಿ ವಿವೇಕ್ ದೊರೈ, ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಕುಮಾರಸ್ವಾಮಿ, ಮಂಡ್ಯ ಡಿಎಚ್ಓ ಮೋಹನ್, ಮಂಡ್ಯದ ಕುಟುಂಬ ಕಲ್ಯಾಣಾಧಿಕಾರಿ ಬೆಟ್ಟಸ್ವಾಮಿ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿತ್ತು. ಸದ್ಯ ವರುಣಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Also Read: ಚಂದನವನ ನಿರ್ಮಾಪಕ ಕೆ.ಗೋವಿಂದ್ ವಿಧಿವಶ
ಐಷಾರಾಮಿ ಮನೆಯಲ್ಲಿ ಇಬ್ಬರು ಗರ್ಭಿಣಿಯರು ಕೂಡ ಪತ್ತೆಯಾಗಿದ್ದಾರೆ. ಗರ್ಭಿಣಿ ಮಹಿಳೆಯೋರ್ವರ ಸಹಾಯದಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.



