ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಖದೀಮರ ಮೇಲೆ ಖಾಕಿ ಫೈರಿಂಗ್ : ಆರೋಪಿ ಬಂಧನ
Puttur: ಕಾನೂನು ಎಷ್ಟೇ ಬಲಪಡಿಸಿದರೂ ಸಹ ಇಂದಿಗೂ ಅಕ್ರಮ ಗೋ ಸಾಗಾಣಿಕೆಗೆ ಪೂರ್ಣ ವಿರಾಮ ನೀಡಲು ಸಾಧ್ಯವಾಗುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಈಶ್ವರ ಮಂಗಲದ ಬೆಳ್ಳಿ ಚಡವು ಎಂಬಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಮ್ಮೆಟ್ಟಿಸಿದ ಪೊಲೀಸರು ಗೋ ಸಾಗಾಟಗಾರರ ಮೇಲೆ ಫೈರಿಂಗ್ ನಡೆಸಿದ್ದಾರೆ.
ಆರೋಪಿ 40 ವರ್ಷ ಅಬ್ದುಲ್ಲಾ ಎಂಬಾತನ ಕಾಲಿಗೆ ಗುಂಡೇಟು ತಗುಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರ ವಾಹನದ ಮೇಲೆಯೇ ಆರೋಪಿಗಳು ವಾಹನ ಹತ್ತಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಈ ಖದೀಮರು ಹಾಸನದಿಂದ ನೆಟ್ಟಣಿಗೆ ಮುಡ್ನೂರು ಬೆಳ್ಳಿಚಡವು ಒಳ ರಸ್ತೆ ಮುಖಾಂತರ ಕೇರಳಕ್ಕೆ ಜಾನುವಾರುಗಳನ್ನು ಸಾಗಿಸುವ ಯತ್ನದಲ್ಲಿದ್ದರು ಎನ್ನಲಾಗಿದೆ. ವಾಹನವನ್ನು ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದರೂ ಕೇಳದ ಆರೋಪಿಗಳು 10 ಕಿಲೋಮೀಟರ್ವರೆಗೆ ಸಾಗಿ ಬಳಿಕ ಹಿಂಬದಿಯಿಂದ ಪೊಲೀಸರ ಜೀಪಿಗೆ ಗುದ್ದಿದ್ದಾರೆ.
Also Read: ಅಶೋಕ ಜನಮನ ಆಯೋಜಕರ ಎಡವಟ್ಟು : ಕೊನೆಗೂ ಕ್ಷಮೆಯಾಚಿಸಿದ ಶಾಸಕ ಅಶೋಕ್ ರೈ
ವಾಹನ ನಿಲ್ಲಿಸದೇ ಐಚರ್ ವಾಹನವನ್ನು ಚೇಸ್ ಮಾಡಿದ ಪೊಲೀಸರು ಗುಂಡು ಹಾರಿಸಿದ್ದಾರೆ. ಒಂದು ಗುಂಡು ಐಚರ್ ವಾಹನಕ್ಕೆ ತಗುಲಿದ್ದು ಮತ್ತೊಂದು ಆರೋಪಿ ಅಬ್ದುಲ್ಲಾ ಕಾಲಿಗೆ ತಗಲಿದೆ.
ಬೆಳ್ಳಿಚಡವು ಬಳಿಯಲ್ಲಿ ಲಾರಿ ಬಿಟ್ಟು ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು ಗುಂಡು ಹಾರಿಸುವ ಮೂಲಕ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಸಬ್ ಇನ್ಸ್ಪೆಕ್ಟರ್ ಜಂಬುರಾಜ್ ಮಹಾಜನ್ ಯಶಸ್ವಿಯಾಗಿದ್ದಾರೆ.
ಗುಂಡೇಟು ತಗುಲಿದ ಆರೋಪಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗೂ ತಪ್ಪಿಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
Also Read: Ashok Jana mana : ಪುತ್ತೂರಿನ ಅಶೋಕ ಜನಮನ ಕಾರ್ಯಕ್ರಮದಲ್ಲಿ ನೂಕು ನುಗ್ಗಲು : 11ಕ್ಕೂ ಅಧಿಕ ಮಂದಿ ಅಸ್ವಸ್ಥ
ಲಾರಿಯಲ್ಲಿ 10 ಜಾನುವಾರುಗಳನ್ನು ಖದೀಮರು ಅಮಾನುಷವಾಗಿ ತುಂಬಿ ಸಾಗಾಟ ನಡೆಸಿದ್ದರು. ಎಲ್ಲಾ ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು 1 ಜಾನುವಾರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ ಎಲ್ಲಾ ಜಾನುವಾರುಗಳು ಗಾಯಗೊಂಡಿವೆ. ಸ್ಥಳಕ್ಕೆ SOCO ಟೀಂ ಸಹಿತ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



