ಉದ್ಯೋಗ ಖಾತ್ರಿ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರು ಕೈಬಿಟ್ಟ ಕೇಂದ್ರ ಸರ್ಕಾರ..! ಕಾಂಗ್ರೆಸ್ ಆಕ್ರೋಶ
ಲೋಕಸಭೆಯಲ್ಲಿ ಭಾರೀ ಗದ್ದಲಗಳ ನಡುವೆಯೇ ಜಿ ರಾಮ್ ಜಿ ಮಸೂದೆ ಮಂಡನೆಯಾಗಿದೆ. ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಎಂ- ನರೇಗಾ ಹೆಸರು ಬದಲಾವಣೆ ಮಾಡುವ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಈ ಯೋಜನೆಗೆ ರೋಜಗಾರ್ ಮತ್ತು ಅಜೀವಿಕಾ ಮಿಷನ್ – ವಿಬಿ ಜಿ ರಾಮ್ ಜಿ ಎಂದು ಮರುನಾಮಕರಣ ಮಾಡುವ ವಿಧೇಯಕವನ್ನು ಕೇಂದ್ರ ಸಚಿವ ಶಿವರಾಜ್ ಚೌಹಾಣ್ ಮಂಡಿಸಿದ್ರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಸದಸ್ಯರು ಸದನದ ಒಳಗೂ ಹೊರಗೂ ಪ್ರತಿಭಟಿಸಿ ಆಕ್ರೋಶ ಹೊರ ಹಾಕಿದ್ರು.
ಗಾಂಧೀಜಿಯವರ ಹೆಸರನ್ನು ಈ ಯೋಜನೆಯಿಂದ ತೆಗೆದು ಹಾಕುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಅವಮಾನಿಸಲಾಗಿದೆ ಎಂಬುದು ವಿಪಕ್ಷಗಳ ಆರೋಪವಾಗಿದೆ. ಸಂಸತ್ನಲ್ಲಿ ಈ ವಿಧೇಯಕದ ಬಗ್ಗೆ ಚರ್ಚೆ ಮುಂದುವರಿಯಲಿರುವ ಕಾರಣ ಮುಂದಿನ 3 ದಿನಗಳ ಕಾಲ ಯಾವುದೇ ಸಂಸದರು ಸಂಸತ್ತಿಗೆ ಗೈರಾಗಬಾರದು ಎಂದು ಕಾಂಗ್ರೆಸ್ ವಿಪ್ ಹೊರಡಿಸಿದೆ.
ಇದನ್ನೂ ಓದಿ: ರಾಜಭವನಕ್ಕೆ ಲೋಕಭವನವೆಂದು ಮರುನಾಮಕರಣ : ಕೇಂದ್ರದ ನಡೆಗೆ ರಾಜ್ಯ ಸರ್ಕಾರದಿಂದ ಆಕ್ಷೇಪ
ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಇಂದು ಕಾಂಗ್ರೆಸ್ ಪಕ್ಷವು ದೇಶವ್ಯಾಪಿ ಪ್ರತಿಭಟನೆಗೆ ನಿರ್ಧರಿಸಿದೆ. ರಾಮನ ಹೆಸರು ಎಳೆದು ತರುವ ಉದ್ದೇಶದಿಂದ ಮಹಾತ್ಮ ಗಾಂಧಿ ಹೆಸರಿಗೆ ಅವಮಾನ ಮಾಡುತ್ತಿರುವ ಬಿಜೆಪಿ ವಿರುದ್ಧ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಪ್ರತಿಭಟನೆ ನಡೆಯಬೇಕು ಎಂದು ಸೂಚನೆ ನೀಡಲಾಗಿದೆ. ಈ ಸಂಬಂಧ ದೇಶದ ಎಲ್ಲಾ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.



