ಗೃಹಲಕ್ಷ್ಮೀ ಫಲಾನುಭವಿಗಳಿಗೆ ಹಣ ನೀಡುವಲ್ಲಿ ಬಾಕಿ ಉಳಿಸಿಕೊಂಡ ವಿಚಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಭಾರೀ ಪ್ರಮಾಣದಲ್ಲಿ ಸದ್ದು ಮಾಡಿತ್ತು. ಇದಾದ ಬಳಿಕ ರಾಜ್ಯ ಸರ್ಕಾರ ಕೂಡ ಹಣ ಪಾವತಿ ಬಾಕಿ ಇರುವ ವಿಚಾರ ಒಪ್ಪಿಕೊಂಡಿತ್ತು. ಆದರೆ ಇದೀಗ ಈ ಬೆನ್ನಲ್ಲೇ ಅನ್ನಭಾಗ್ಯದ ಹಣ ಕೂಡ ಬಾಕಿ ಆಗಿರುವ ವಿಚಾರ ವಿಧಾನಸೌಧದ ಅಧಿವೇಶನದಲ್ಲಿ ಮುನ್ನಲೆಗೆ ಬಂದಿದೆ.
ಹೌದು..! ಅನ್ನಭಾಗ್ಯದ ಫಲಾನುಭವಿಗಳಿಗೆ ಕಳೆದ ವರ್ಷ ಜನವರಿ ತಿಂಗಳ ಅಕ್ಕಿ ಹಣ ಪಾವತಿಯಾಗಿಲ್ಲ ಎಂದು ವಿಧಾನಸೌಧದಲ್ಲಿ ಬಿಜೆಪಿ ಸದಸ್ಯ ಮಹೇಶ ಟೆಂಗಿನಕಾಯಿ ಈ ಪ್ರಶ್ನೆಯನ್ನು ಮುಂದಿಟ್ಟಿದ್ದರು.
ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಮಹೇಶ್ ಟೆಂಗಿನಕಾಯಿ ಪ್ರಸ್ತಾಪಕ್ಕೆ ಉತ್ತರಿಸಿದ ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ, 2025ರ ಜನವರಿ ತಿಂಗಳಲ್ಲಿ ಅನ್ನಭಾಗ್ಯದ 1.27 ಕೋಟಿ ಫಲಾನುಭವಿಗಳಿಗೆ ತಲಾ 5 ಕೆ.ಜಿ. ಅಕ್ಕಿ ನೀಡಿಲ್ಲ. ಅಕ್ಕಿ ಬದಲಾಗಿ ನೀಡುತ್ತಿದ್ದ ತಲಾ 170 ರು.ನಂತೆ 657 ಕೋಟಿ ರು. ಪಾವತಿ ಮಾಡಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಬ್ಯಾಚುಲರ್ಗಳಿಗೆ ವರದಾನ; ಕೇವಲ 10 ರೂಪಾಯಿಗೆ ಸಿಗುತ್ತೆ ನಂದಿನಿ ಹಾಲು, ಮೊಸರು
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಮೊದಲು ಅಕ್ಕಿಯನ್ನೇ ನೀಡುತ್ತಿದ್ದವು. ಆದರೆ ಅಕ್ಕಿ ಕೊರತೆಯಿಂದಾಗಿ ತಲಾ 170 ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷ ಜನವರಿ ತಿಂಗಳಲ್ಲಿ ಕೇಂದ್ರ ಸರ್ಕಾರ ಅಕ್ಕಿ ಪೂರೈಸುವುದಾಗಿ ಹೇಳಿತ್ತು. ಇದರಿಂದ ಹಣ ವರ್ಗಾವಣೆ ನಿಲ್ಲಿಸಿದೆವು. ಆದರೆ ಕೇಂದ್ರ ಸರ್ಕಾರ ಫೆಬ್ರವರಿಯಿಂದ ಅಕ್ಕಿ ಪೂರೈಕೆ ಮಾಡಿದೆ. ಹೀಗಾಗಿ ಜನವರಿ 1 ತಿಂಗಳ 657ಕೋಟಿ ರೂಪಾಯಿ ಹಣ ಬಾಕಿಯಾಗಿದೆ ಎಂದಿದ್ದಾರೆ.



