ಬೆಂಗಳೂರಿಗರ ಹೊಸ ವರ್ಷಾಚರಣೆ ಸಂಭ್ರಮದ ಮೇಲೆ ಆರ್ಸಿಬಿ ದುರಂತ ಕರಿನೆರಳು : ಎಂಜಿರೋಡ್ನಲ್ಲಿ ಸೆಲ್ರಬೇಷನ್ಗೆ ಬೀಳುತ್ತಾ ಬ್ರೇಕ್!
2026 ಸಮೀಪಿಸಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೊಸ ವರ್ಷಾಚರಣೆ ಎಂದರೆ ಸಾಕು ಯುವ ಸಮೂಹ ರಾಜಧಾನಿ ಬೆಂಗಳೂರಿನ ಎಂ.ಜಿ ರೋಡ್ನಲ್ಲಿ ಕುಣಿದು ಕುಪ್ಪಳಿಸುವ ಕನಸು ಕಾಣುತ್ತಿರುತ್ತದೆ. ಆದರೆ ಈ ಬಾರಿ ಯಾಕೋ ಈ ಕನಸು ಕನಸಾಗಿಯೇ ಉಳಿಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಈ ಬಾರಿ ಎಂ.ಜಿ ರೋಡ್ನಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಮಾಡದೇ ಇರಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರ ಇಂತಹದ್ದೊಂದು ನಿರ್ಧಾರಕ್ಕೆ ಬರಲು ಕಾರಣ ಆರ್ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ದುರಂತ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿಯೂ ಎಂ.ಜಿ ರಸ್ತೆಯಲ್ಲಿ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇರುವುದರಿಂದ ದುರಂತ ಸಂಭವಿಸುವ ಅಪಾಯವಿದೆ.ಹೀಗಾಗಿ ರಾಜಧಾನಿ ಪೊಲೀಸರು ಹಾಗೂ ಜಿಬಿಎ ಅಧಿಕಾರಿಗಳು ಸರಣಿ ಸಭೆ ನಡೆಸಿದ್ದು ಹೊಸ ವರ್ಷಾಚರಣೆ ಸಂಭ್ರಮದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಇಂದಿನಿಂದ ಶುರು ‘ಡೆವಿಲ್’ ಹಬ್ಬ: ಎಲ್ಲೆಲ್ಲೂ ರಾರಾಜಿಸಿದ ದಾಸನ ಕಟೌಟ್
ಈ ಬಾರಿ ಎಂ.ಜಿ ರೋಡ್ನಲ್ಲಿ ಹೊಸ ವರ್ಷಾಚರಣೆಗೆ ಅನುವು ಮಾಡಿಕೊಡುವುದು ಬೇಡ ಎನ್ನುವುದೇ ಅಧಿಕಾರಿಗಳ ಅಭಿಪ್ರಾಯವಾಗಿದೆ ಎನ್ನಲಾಗಿದೆ.ಈ ಸಂಬಂಧ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಲಿದ್ದಾರೆ. ಈ ವರದಿ ಪರಿಶೀಲನೆ ಬಳಿಕ ರಾಜ್ಯ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.



