ಪುತ್ತೂರು : ಉಪ್ಪಿನಂಗಡಿಯ ಬಜತ್ತೂರಿನಲ್ಲಿ ನೂತನ ಟೋಲ್ ಪ್ಲಾಜಾ ನಿರ್ಮಾಣ : ಎಂದಿನಿಂದ ಕಾರ್ಯಾರಂಭ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದಲ್ಲಿ ನೂತನ ಟೋಲ್ ಪ್ಲಾಜಾ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮುಂದಿನ ಏಪ್ರಿಲ್ ತಿಂಗಳಿನಿಂದ ಕಾರ್ಯನಿರ್ವಹಿಸಲಿದೆ. ಈ ಟೋಲ್ ಪ್ಲಾಜಾ ಕಾರ್ಯಾರಂಭಗೊಂಡ ಬಳಿಕ ವಾಹನ ಸವಾರರು ಇಲ್ಲಿ ಟೋಲ್ ಪಾವತಿ ಮಾಡಿ ಸಂಚರಿಸಬೇಕಿದೆ.
ಬೆಂಗಳೂರು – ಮಂಗಳೂರು ಮಾರ್ಗವಾಗಿ ತೆರಳುವಾಗ ಒಟ್ಟೂ ಆರು ಟೋಲ್ ಪ್ಲಾಜಾಗಳಲ್ಲಿ ಹಣ ಪಾವತಿ ಮಾಡಬೇಕಿತ್ತು. ನೆಲಮಂಗಲ ಹಾಗೂ ಸಕಲೇಶಪುರ ನಡುವೆ 5, ದಕ್ಷಿಣ ಕನ್ನಡ ಜಿಲ್ಲೆ ಬಿ.ಸಿ ರೋಡ್ನಲ್ಲಿರುವ ಬ್ರಹ್ಮರಕೂಟ್ಲುವಿನಲ್ಲಿ 1 ಪ್ಲಾಜಾ ವಾಹನ ಸವಾರರಿಗೆ ಸಿಗುತ್ತಿತ್ತು. ಇನ್ಮುಂದೆ ಈ ಸಾಲಿಗೆ ಬಜತ್ತೂರು ಟೋಲ್ ಕೂಡ ಸೇರ್ಪಡೆಗೊಳ್ಳಲಿದೆ.
ಕೆಎನ್ಆರ್ ಕನ್ಸ್ಟ್ರಕ್ಷನ್ ಲಿಮಿಟೆಡ್ ಕಂಪನಿಯು ಬಿ.ಸಿ ರೋಡ್ನಿಂದ ಪೆರಿಯಶಾಂತಿವರೆಗೆ 46 ಕಿಲೋಮೀಟರ್ ರಸ್ತೆ ಮಾರ್ಗವನ್ನು ಗುತ್ತಿಗೆ ಪಡೆದಿದೆ. ಇದೀಗ ಬಜತ್ತೂರಿನಲ್ಲಿ ಟೋಲ್ ನಿರ್ಮಾಣ ಮಾಡಲಾಗುತ್ತಿದ್ದು ಒಂದು ಮಾರ್ಗಕ್ಕೆ ತಲಾ 4 ಲೇನ್ಗಳಂತೆ ಒಟ್ಟೂ 8 ಲೇನ್ಗಳ ವ್ಯವಸ್ಥೆ ಮಾಡಲಾಗಿದೆ.ಅದೇ ರೀತಿ ಬೈಕ್ಗಳು, ಆಟೋರಿಕ್ಷಾ ಸೇರಿದಂತೆ ವಿವಿಧ ವಾಹನಗಳಿಗೆ ಪ್ರತ್ಯೇಕ ಲೇನ್ ವ್ಯವಸ್ಥೆ ನಿರ್ಮಾಣಗೊಳ್ಳುತ್ತಿದೆ.
ಇದನ್ನೂ ಓದಿ: ಮಂಗಳೂರಿನ ನ್ಯಾಯಾಲಯಕ್ಕೂ ತಟ್ಟಿದ ಜೈಲು ಜಾಮರ್ ಎಫೆಕ್ಟ್ : ನೆಟ್ವರ್ಕ್ ಸಿಗದೇ ಹೈಕೋರ್ಟ್ ಮೆಟ್ಟಿಲೇರಿದ ವಕೀಲರು
ಬಿ.ಸಿ ರೋಡ್ನಲ್ಲಿರುವ ಬ್ರಹ್ಮರಕೂಟ್ಲುವಿನಲ್ಲಿ ಟೋಲ್ ಪ್ಲಾಜಾ ನಿರ್ಮಾಣವಾದ ಬಳಿಕ ಶುರುವಾದ ಜನಾಕ್ರೋಶ ಇಂದಿಗೂ ಆರಿಲ್ಲ. ಇದೀಗ ಈ ಸಾಲಿಗೆ ಬಜತ್ತೂರು ಟೋಲ್ ಕೂಡ ಸೇರಲಿದ್ಯಾ ಎಂಬ ಅನುಮಾನ ದಟ್ಟವಾಗಿದೆ.



