ಬೈಂದೂರು : ಶಾಲಾ ವಾಹನಕ್ಕೆ ನಕಲಿ ವಿಮಾ ಪಾಲಿಸಿ, ಪ್ರಕರಣ ದಾಖಲು

Byndoor News: ಬೈಂದೂರು: ಶಾಲಾ ವಾಹನಗಳಿಗೆ ನಕಲಿ ವಿಮಾ ಪಾಲಿಸಿಗಳನ್ನು ನೀಡಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ವಿಮಾ ಏಜೆಂಟರ ವಿರುದ್ದ ಬೈಂದೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಂಬದಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮಹಾಬಲ. ಕೆ ಅವರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
Also Read: ಉಡುಪಿ : ಆರ್ಟಿಓ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
ಏನಿದು ವಿಮಾ ವಂಚನೆ ಪ್ರಕರಣ ?
ಜನವರಿ 2025 ರಲ್ಲಿ ಶಾಲೆಗಾಗಿ ದಾನಿಗಳು ನೀಡಿದ ಮಿನಿ ಬಸ್ (KA-20 AC-5476) ಗೆ ವಿಮಾ ಏಜೆಂಟ್ ರಾಕೇಶ ಎಂಬುವವರು ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿಯ ವಿಮಾ ಪಾಲಿಸಿ (ಸಂಖ್ಯೆ: 706022523400000017) ನೀಡಿದ್ದರು. ಇದರ ಅವಧಿ 06/01/2025 ರಿಂದ 05/06/2026 ರವರೆಗೆ ಇದ್ದು, ಪ್ರೀಮಿಯಂ ಮೊತ್ತ ₹28,147 ಆಗಿತ್ತು.
ಇತ್ತೀಚೆಗೆ ಕೋಟಾ ಪೊಲೀಸ್ ಠಾಣೆಯಲ್ಲಿ ಶಾಲಾ ಬಸ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಮಾ ಪರಿಹಾರಕ್ಕಾಗಿ ದಾವೆ ಹೂಡಿದಾಗ, ಆ ಬಸ್ಸಿನ ವಿಮಾ ಪಾಲಿಸಿಯು ನಕಲಿ ಎಂದು ತಿಳಿದುಬಂದಿತ್ತು.
ಈ ಬಗ್ಗೆ ಕೋಟಾ ಠಾಣೆಯಲ್ಲಿ ರಾಕೇಶ ಮತ್ತು ಚರಣ್ ಬಾಬು ಮೇಸ್ತ್ರ ಎಂಬವರ ಮೇಲೆ ವಂಚನೆ ಪ್ರಕರಣ ದಾಖಲಾದ ವಿಷಯ ದಿನಪತ್ರಿಕೆಯ ಮೂಲಕ ದೂರುದಾರರಿಗೆ ಗೊತ್ತಾಗಿದೆ.
ಇದರಿಂದ ಅನುಮಾನಗೊಂಡ ಮಹಾಬಲ ಅವರು ತಮ್ಮ ಶಾಲಾ ಬಸ್ಸಿನ ಪಾಲಿಸಿಯನ್ನು ನಾಗೂರಿನ ಇನ್ಶೂರೆನ್ಸ್ ಏಜೆಂಟರಲ್ಲಿ ಪರಿಶೀಲಿಸಿದಾಗ, ಅದು ಕೂಡ ನಕಲಿ ವಿಮಾ ಪಾಲಿಸಿ ಎಂದು ದೃಢಪಟ್ಟಿದೆ.
ರಾಕೇಶ ಮತ್ತು ಚರಣ್ ಬಾಬು ಮೇಸ್ತ್ರ ಎಂಬುವವರು ಸೇರಿಕೊಂಡು ಕಾಲ್ತೋಡು, ಹೇರಂಜಾಲು, ಕಂಬದಕೋಣೆ, ಪಡುವರಿ ಸೇರಿದಂತೆ ಬೈಂದೂರಿನ ಹಲವು ಸರ್ಕಾರಿ ಶಾಲೆಗಳ ವಾಹನಗಳಿಗೂ ನಕಲಿ ವಿಮಾ ಪಾಲಿಸಿಗಳನ್ನು ನೀಡಿ ವಂಚಿಸಿರುವುದು ತಿಳಿದುಬಂದಿದೆ.
ನಕಲಿ ವಿಮಾ ಪತ್ರ ತಯಾರಿಸಿ ಶಾಲೆಗೆ ಮೋಸ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇದೀಗ ವಿಮಾ ಏಜೆಂಟರಾದ ರಾಕೇಶ ಮತ್ತು ಚರಣ್ ಬಾಬು ಮೇಸ್ತ್ರ ಎಂಬವರ ವಿರುದ್ದ ಬೈಂದೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



