ಜಾತಿ ಗಣತಿಗೆ ತೆರಳಿದ್ದ ಶಿಕ್ಷಕಿ ಶವವಾಗಿ ಪತ್ತೆ : ಗಣತಿ ಒತ್ತಡದಿಂದ ಆತ್ಮಹತ್ಯೆ ಶಂಕೆ
Teacher Caste Census Tragedy: ರಾಜ್ಯ ಸರ್ಕಾರದ ವತಿಯಿಂದ ಶಿಕ್ಷಕರಿಗೆ ವಹಿಸಲಾಗಿರುವ ಜಾತಿ ಗಣತಿಗೆ ತೆರಳಿದ್ದ ಶಾಲಾ ಶಿಕ್ಷಕಿಯೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆಯು ಕೋಲಾರ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತ ಶಿಕ್ಷಕಿಯನ್ನು 50 ವರ್ಷದ ಅಕ್ತರ್ ಬೇಗಂ ಎಂದು ಗುರುತಿಸಲಾಗಿದೆ. ಜಾತಿ ಗಣತಿ ವಿಚಾರವಾಗಿ ಮೇಲಿನ ಅಧಿಕಾರಿಗಳಿಂದ ಬರುತ್ತಿದ್ದ ಒತ್ತಡ ಸಹಿಸಲಾರದೇ ಶಿಕ್ಷಕಿ ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಅನುಮಾನಗಳು ವ್ಯಕ್ತವಾಗುತ್ತಿದೆ.
ಸೋಮವಾರದಂದು ಜಾತಿ ಗಣತಿ ಸಮೀಕ್ಷೆಗೆಂದು ತೆರಳಿದ್ದ ಶಿಕ್ಷಕಿ ಅಕ್ತರ್ ಬೇಗಂ ಬಳಿಕ ಮನೆಗೆ ವಾಪಸ್ಸಾಗಿರಲಿಲ್ಲ. ಇದರಿಂದ ಆತಂಕಕ್ಕೆ ಒಳಗಾಗಿದ್ದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಬಳಿಕ ಬುಧವಾರದಂದು ಅಕ್ತರ್ ಬೇಗಂ ಅವರ ಬ್ಯಾಗ್ ಬೇತಮಂಗಲ ಹೋಬಳಿಯ ಅಮಾನಿಕೆರೆಯಲ್ಲಿ ಪತ್ತೆಯಾಗಿತ್ತು.
ಬಳಿಕ ಸ್ಥಳೀಯರಿಗೆ ಅಕ್ತರ್ ಬೇಗಂ ಅವರ ಶವ ಕೂಡ ತೇಲುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸ್ಥಳೀಯರು ಮಹಿಳೆಯ ಶವ ಕೆರೆಯಲ್ಲಿ ತೇಲುತ್ತಿರುವ ಬಗ್ಗೆ ಸ್ಥಳೀಯ ಠಾಣಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಶವ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
Also Read: Caste survey: ಇನ್ಮುಂದೆ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಜಾತಿ ಸಮೀಕ್ಷೆ : ಜಿಬಿಎ ಹೊಸ ಆದೇಶ
ಕುಟುಂಬಸ್ಥರು ಇದು ಅಕ್ತರ್ ಬೇಗಂ ಅವರ ಮೃತದೇಹವೆಂದು ಧೃಡಪಡಿಸಿದ್ದಾರೆ. ಬಳಿಕ ಕೆಜಿಎಫ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಶವವನ್ನು ರವಾನೆ ಮಾಡಲಾಗಿದೆ. ಕಳೆದ 15 ದಿನಗಳಿಂದ ಜಾತಿ ಗಣತಿ ಕಾರ್ಯದಲ್ಲಿ ನಿರತರಾಗಿದ್ದ ಅಕ್ತರ್ ಬೇಗಂ ನಿರಂತರ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದರು ಎನ್ನಲಾಗಿದೆ.
ಸಮೀಕ್ಷೆಗೆ ತೆರಳಿದ ಸಂದರ್ಭದಲ್ಲಿ ಅನೇಕ ಮನೆಗಳಲ್ಲಿ ಸರಿಯಾದ ಪ್ರತಿಕ್ರಿಯೆ ದೊರಕುತ್ತಿರಲಿಲ್ಲ. ಅದರೆ ಇದನ್ನು ಅರ್ಥ ಮಾಡಿಕೊಳ್ಳದ ಹಿರಿಯ ಅಧಿಕಾರಿಗಳು ಬೇಗ ಜಾತಿ ಸಮೀಕ್ಷೆ ಮುಗಿಸುವಂತೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಇದರಿಂದ ಅಕ್ತರ್ ಬೇಗಂ ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಅಕ್ತರ್ ಬೇಗಂ ಕುಟುಂಬಸ್ಥರು ತಿಳಿಸಿದ್ದಾರೆ.
Also Read: ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗಿಯಾಗುವಂತಿಲ್ಲ: ರಾಜ್ಯ ಸರ್ಕಾರದಿಂದ ಖಡಕ್ ಎಚ್ಚರಿಕೆ
ಪತ್ನಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಅಕ್ತರ್ ಬೇಗಂ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇದೀಗ ಅಕ್ತರ್ ಬೇಗಂ ಅವರು ಮೃತಪಟ್ಟಿರುವ ವಿಚಾರ ಅವರ ಕುಟುಂಬಕ್ಕೆ ಬರಸಿಡಿಲಿನಂತೆ ಬಂದೆರಗಿದೆ.
ಜಾತಿ ಗಣತಿಯಿಂದ ನಾವು ಅಕ್ತರ್ ಬೇಗಂ ಅವರನ್ನು ಕಳೆದುಕೊಂಡಿದ್ದೇವೆ ಅಂತಾ ಅಕ್ತರ್ ಬೇಗಂ ಅವರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಘಟನೆಗೆ ನಿಖರ ಕಾರಣ ಸೂಕ್ತ ತನಿಖೆ ಬಳಿಕವಷ್ಟೇ ತಿಳಿದು ಬರಬೇಕಿದೆ.



