ದಕ್ಷಿಣ ಆಫ್ರಿಕಾ ವಿರುದ್ಧದದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು
ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡದ ನಡುವೆ ನಡೆಯುತ್ತಿರುವ ಟಿ 20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನ್ನು ಅನುಭವಿಸಿದೆ. ಕಟಕ್ನಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು ಬರೋಬ್ಬರಿ 101 ರನ್ಗಳ ಅಂತರದಲ್ಲಿ ಸೋಲಿಸಿತ್ತು. ಆದರೆ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ 51 ರನ್ಗಳ ಅಂತರದಲ್ಲಿ ಸೋಲನ್ನು ಕಂಡಿದೆ.
ಕಳೆದ ಬಾರಿಯ ಪಂದ್ಯದಂತೆಯೇ ಈ ಬಾರಿಯೂ ಟಾಪ್ ಆರ್ಡರ್ ಬ್ಯಾಟರ್ಗಳ ವೈಫಲ್ಯವೇ ಈ ಸೋಲಿಗೆ ಕಾರಣವಾಗಿದೆ. ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಹಾಗೂ ಉಪನಾಯಕ ಶುಭಮನ್ಗಿಲ್ ಅವರ ಹೀನಾಯ ಪ್ರದರ್ಶನದಿಂದ ಟೀಂ ಇಂಡಿಯಾ ಸೋಲನ್ನು ಅನುಭವಿಸಿದೆ.ಕಳೆದೊಂದು ವರ್ಷದಿಂದ ಇಬ್ಬರೂ ಆಟಗಾರರು ಟಿ 20 ಪಂದ್ಯಾಟದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಲೇ ಬರುತ್ತಿದ್ದಾರೆ .
ನ್ಯೂಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 213 ರನ್ಗಳನ್ನು ಗಳಿಸಿತು. ಕ್ವಿಂಟನ್ ಡಿ ಕಾಕ್ 46 ಎಸೆತಗಳಿಗೆ 90 ರನ್ಗಳನ್ನು ಸಿಡಿಸುವ ಮೂಲಕ ತಂಡಕ್ಕೆ ಆಸರೆ ಎನಿಸಿದರು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 162 ರನ್ಗಳಿಗೆ ತನ್ನ ಸಂಪೂರ್ಣ ವಿಕೆಟ್ ಕಳೆದುಕೊಂಡಿತು. ಈ ಮೂಲಕ 51 ರನ್ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಈ ಮೂಲಕ ದಕ್ಷಿಣ ಆಫ್ರಿಕಾ ಹಾಗೂ ಟೀಂ ಇಂಡಿಯಾ ನಡುವಿನ ಟಿ20 ಸರಣಿ ಸದ್ಯಕ್ಕೆ 1-1 ಅಂತರದಲ್ಲಿ ಸಮಬಲಗೊಂಡಿದೆ.
ಇದನ್ನೂ ಓದಿ: ಕ್ರಿಕೆಟ್ ನೇರಪ್ರಸಾರದಿಂದ ಏಕಾಏಕಿ ಹಿಂದೆ ಸರಿದ ಜಿಯೋ ಹಾಟ್ಸ್ಟಾರ್ : ಐಸಿಸಿಗೆ ಶುರು ಹೊಸ ತಲೆನೋವು
ಮುಂದಿನ ಪಂದ್ಯವು ಭಾನುವಾರದಂದು ಧರ್ಮಶಾಲಾ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ. 2ನೇ ಪಂದ್ಯದಲ್ಲಿ ಟೀಂ ಇಂಡಿಯಾದ ಸೋಲಿಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳ ಕಳಪೆ ಪ್ರದರ್ಶನವೇ ಮುಖ್ಯ ಕಾರಣವಾಗಿದೆ. ವರುಣ್ ಚಕ್ರವರ್ತಿ ಹೊರತುಪಡಿಸಿದರೆ ಮಿಕ್ಕೆಲ್ಲ ಬೌಲರ್ಗಳು ಅತ್ಯಂತ ಹೀನಾಯ ಪ್ರದರ್ಶನ ತೋರಿದರು. ಭರವಸೆಯ ಬೌಲರ್ಗಳು ಎನಿಸಿದ ಜಸ್ಪ್ರೀತ್ ಬೂಮ್ರಾ ಮತ್ತು ಆರ್ಶ್ದೀಪ್ ಸಿಂಗ್ ಕೂಡ 99 ರನ್ಗಳನ್ನು ಬಿಟ್ಟುಕೊಡುವ ಮೂಲಕ ಕಳಪೆ ಬೌಲಿಂಗ್ ಪ್ರದರ್ಶಿಸಿದರು. 16 ವೈಡ್ಗಳನ್ನು ಬಿಟ್ಟುಕೊಡುವ ಮೂಲಕ ಬೌಲರ್ಗಳು ನಿರ್ಲಕ್ಷ್ಯ ತೋರಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಮುಂದಿನ ಪಂದ್ಯಾಟದಲ್ಲಿ ಟೀಂ ಇಂಡಿಯಾ ಯಾವ ರೀತಿ ಕಮ್ಬ್ಯಾಕ್ ಮಾಡುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.



