ನಲಪಾಡ್ ಅಧ್ಯಕ್ಷ, ರಕ್ಷ ರಾಮಯ್ಯ ಕಾರ್ಯಾಧ್ಯಕ್ಷ .? ಅಪಹಾಸ್ಯಕ್ಕೊಳಗಾಗುತ್ತಿದೆ ಎಐಸಿಸಿ

ಬೆಂಗಳೂರು : ಚುನಾವಣಾ ಗೊಂದಲದ ನಡುವಲ್ಲೇ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಹಾಗೂ ರಕ್ಷಾ ರಾಮಯ್ಯ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕವಾಗೋ ಸಾಧ್ಯತೆಯಿದೆ. ಯುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯನ್ನು ನಡೆಸಿ ಹೊಸ ದಾಖಲೆ ಬರೆಯುವುದಾಗಿ ಹೇಳಿದ್ದ ಎಐಸಿಸಿ ಡಿಜಿಟಲ್ ತಂತ್ರಾಜ್ಞಾನವನ್ನು ಬಳಸಿ ಚುನಾವಣೆಯನ್ನು ನಡೆಸಿದೆ. ಮಾತ್ರವಲ್ಲ ಫೇಮ್ ಸಂಸ್ಥೆ ಚುನಾವಣಾ ಫಲಿತಾಂಶವನ್ನೂ ಪ್ರಕಟಿಸಿದೆ. ಆದರೆ ಚುನಾವಣೆಯಲ್ಲಿನ ಕೆಲ ಮಾನದಂಡೇ ಇದೀಗ ಎಐಸಿಸಿಯನ್ನು ಅಪಹಾಸ್ಯಕ್ಕೆ ಗುರಿ ಮಾಡಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಆಪ್ ಮೂಲಕ ಫೇಮ್ ಸಂಸ್ಥೆ ಚುನಾವಣೆಯನ್ನು ಮುಗಿಸಿದೆ. ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದಿದ್ದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರನ್ನು ಅನರ್ಹರನ್ನಾಗಿಸಿದ್ದು, ಎರಡನೇ ಅತೀ ಹೆಚ್ಚು ಮತಗಳನ್ನು ಗಳಿಸಿದ್ದ ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ತೆಸ್ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ರಕ್ಷಾ ರಾಮಯ್ಯ ನೇಮಕದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಅಪಸ್ವರ ಕೇಳಿಬಂದಿದೆ. ನಲಪಾಡ್ ಅನರ್ಹಗೊಳಿಸಿರೋದು ಇದೀಗ ಎಐಸಿಸಿ ಚುನಾವಣಾ ಸಮಿತಿಯ ವೈಫಲ್ಯತೆಯನ್ನು ಪ್ರಶ್ನಿಸುವಂತಾಗಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದ ನಂತರದಲ್ಲಿ ನಾಮಪತ್ರ ಹಿಂಪಡೆಯಲು ಹಾಗೂ ನಾಮಪತ್ರ ತಿರಸ್ಕಾರ ಮಾಡುವುದಕ್ಕೆ ಅವಕಾಶವನ್ನು ಕಲ್ಪಿಸುವುದು ಸಾಮಾನ್ಯ. ಆದರೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರದಲ್ಲಿ ಅನರ್ಹರನ್ನಾಗಿ ಘೋಷಣೆ ಮಾಡುವುದು ಕಾನೂನಿಗೆ ವಿರುದ್ದವಾಗಿದೆ. ಪ್ರಮುಖವಾಗಿ ಚುನಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ರಾಜಕಾರಣದ ಕುರಿತು ಅನುಭವವೇ ಇಲ್ಲದವರನ್ನು ಚುನಾವಣಾ ಉಸ್ತುವಾರಿ ಸಮಿತಿಯಲ್ಲಿ ನೇಮಕ ಮಾಡಿದೆ. ಅಲ್ಲದೇ ಡಿಜಿಟಲ್ ತಂತ್ರಜ್ಞಾನದ ಮೂಲಕ ಚುನಾವಣೆ ನಡೆಸಲು ಮುಂದಾದ ಎಐಸಿಸಿ ತಾಂತ್ರಿಕ ಸಲಹೆಯನ್ನಷ್ಟೇ ಪಡೆಯುವ ಬದಲು, ತಾಂತ್ರಿಕವಾಗಿ ಪರಿಣಿತರಾದವರ ಕೈಗೆ ಚುನಾವಣಾ ಉಸ್ತುವಾರಿ ಹೊಣೆಯನ್ನು ನೀಡಿ ಇದೀಗ ಇಕ್ಕಟ್ಟಿಗೆ ಸಿಲುಕಿದೆ.

ಕೇವಲ ಕಾರ್ಪೋರೇಟ್ ಉದ್ಯಮದಲ್ಲಿ ಅನುಭವ ಹೊಂದಿರುವವರ ಕೈಗೆ ಚುನಾವಣೆಯ ಹೊಣೆಗಾರಿಕೆಯನ್ನು ನೀಡಿದ್ರೆ ಹೀಗೆ ಆಗೋದು ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಅಲ್ಲದೇ ಮಹಮ್ಮದ್ ಹ್ಯಾರಿಸ್ ನಲಪಾಡ್ ಚುನಾವಣೆಯಲ್ಲಿ ಗೆಲುವನ್ನು ಕಂಡಿದ್ದರೂ ಕೂಡ ಅನರ್ಹಗೊಳಿಸಿರುವುದು ಎಷ್ಟು ಸರಿ ಅನ್ನೋ ಕುರಿತು ಕಾಂಗ್ರೆಸ್ ನಾಯಕರೇ ಪ್ರಶ್ನಿಸುತ್ತಿದ್ದಾರೆ.

ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಮಹಮ್ಮದ್ ಹ್ಯಾರಿಸ್ ನಲಪಾಡ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಕುರಿತು ರಕ್ಷಾ ರಾಮಯ್ಯ ಜೊತೆಗೆ ಮಾತುಕತೆ ನಡೆಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಯುವ ಕಾಂಗ್ರೆಸ್ ನ ಕರ್ನಾಟಕದ ಉಸ್ತುವಾರಿ ಲೋಹಾರ್ ಅವರ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ. ಗುಜರಾತ್ ನಲ್ಲಿಯೂ ಇಂತಹದ್ದೇ ಸ್ಥಿತಿ ನಿರ್ಮಾಣವಾದಾಗ ಗುಂಜನ್ ಪಟೇಲ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಆದರೆ ನಲಪಾಡ್ ಅತೀ ಹೆಚ್ಚು ಮತಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ಅವರನ್ನೇ ಅಧ್ಯಕ್ಷ್ಯರನ್ನಾಗಿಯೂ ಎರಡನೇ ಅತೀ ಹೆಚ್ಚು ಮತ ಪಡೆದ ರಕ್ಷಾ ರಾಮಯ್ಯ ಅವರನ್ನು ಕಾರ್ಯಾಧ್ಯಕ್ಷರನ್ನಾಗಿಯೂ ನೇಮಕ ಮಾಡುವ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಯೂತ್ ಕಾಂಗ್ರೆಸ್ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಇದೀಗ ಎಐಸಿಸಿ ಅಪಹಾಸ್ಯಕ್ಕೆ ಗುರಿಯಾಗಿದೆ.

Comments are closed.