ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈಟೆಕ್ ಭದ್ರತೆ : ಕಾಲ್ತುಳಿತ ನಡೆದ ಸ್ಥಳದಲ್ಲಿ ಭವ್ಯ ಪ್ರವೇಶ ದ್ವಾರ
ಆರ್ಸಿಬಿ ವಿಜಯೋತ್ಸವ ಕಾಲ್ತುಳಿತ ದುರಂತದ ಬಳಿಕ ಬೆಂಗಳೂರು ಚಿನ್ನಸ್ವಾಮಿ ನಾನಾ ಅಪವಾದಗಳನ್ನು ಎದುರಿಸುತ್ತಲೇ ಬರ್ತಿದೆ. ಈ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದೆ.
ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ್ದ ಗೇಟ್ ಸಂಖ್ಯೆ 18 ಹಾಗೂ 10ರ ಬಳಿ ಇರುವ ಸಣ್ಣ ಗೋಡೆಗಳನ್ನು ಒಡೆಯಲಾಗುತ್ತಿದೆ. ಪ್ರವೇಶ ಹಾಗೂ ನಿರ್ಗಮನದ ಸಂದರ್ಭದಲ್ಲಿ ಯಾವುದೇ ತೊಂದರೆ ಸಂಭವಿಸದಂತೆ ವಿಶಾಲವಾದ ಜಾಗ ವ್ಯವಸ್ಥೆ ಹಾಗೂ ಬೃಹತ್ ಗೇಟ್ ಸೌಕರ್ಯ ಕಲ್ಪಿಸಲಾಗುತ್ತಿದೆ.
ಜನದಟ್ಟಣೆ ನಿಯಂತ್ರಣಕ್ಕೆ 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ 350 ಎಐ ಕ್ಯಾಮರಾಗಳನ್ನು ಕ್ರೀಡಾಂಗಣದ ಸುತ್ತ ಅಳವಡಿಸಲಾಗುತ್ತಿದೆ. ಭದ್ರತೆಯ ವಿಚಾರದಲ್ಲಿ ಪೊಲೀಸ್ ಇಲಾಖೆಯ ಮೇಲೆ ಮಾತ್ರ ಅವಲಂಬಿತರಾಗಿರದೇ ಆರ್ಸಿಬಿ ಫ್ರಾಂಚೈಸಿ ತನ್ನದೇ ಆದ ವಿಶೇಷ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಿದೆ.
ಇದನ್ನೂ ಓದಿ: ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ: ಕಿವೀಸ್ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಮೊದಲ ಬ್ಯಾಟರ್!
ಆರ್ಸಿಬಿ ದುರಂತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ನಿಷೇಧ ಹೇರಲಾಗಿತ್ತು. ಆದರೆ ಇದೀಗ ಈ ನಿಷೇಧವನ್ನು ರಾಜ್ಯ ಸರ್ಕಾರ ತೆರವುಗೊಳಿಸಿದ್ದು ಬಹುತೇಕ ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಕ್ಕೆ KSCA ಮುಂದಾಗಿದೆ.



