ಇಂಡಿಗೋ ವಿಮಾನ ರದ್ದು : ಮಧುಮಕ್ಕಳೇ ಇಲ್ಲದೇ ನಡೆಯಿತು ಆರತಕ್ಷತೆ ಸಮಾರಂಭ..!
ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು ಇದರ ಬಿಸಿ ಮದುವೆ ಆರತಕ್ಷತೆ ಸಮಾರಂಭಕ್ಕೂ ತಟ್ಟಿದೆ. ತಮ್ಮ ಮಕ್ಕಳ ಆರತಕ್ಷತೆ ಕಾರ್ಯಕ್ರಮಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದ ಪೋಷಕರು ಕೊನೆಗೆ ತಾವೇ ವಧು ವರರಂತೆ ವೇದಿಕೆಯಲ್ಲಿ ನಿಂತು ಅತಿಥಿಗಳಿಂದ ಹಾರೈಕೆ ಸ್ವೀಕರಿಸಿದ ವಿಚಿತ್ರ ಪ್ರಸಂಗವೊಂದು ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ನಡೆದಿದೆ. ಇಂಡಿಗೋ ವಿಮಾನ ರದ್ದತಿಯಿಂದ ವಧು ವರರು ಊರಿಗೆ ತಲುಪಲು ಸಾಧ್ಯವಾಗದೇ ಇದ್ದದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ನವೆಂಬರ್ 23ರಂದು ಭುವನೇಶ್ವರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ವಧು ಮೇಧಾ ಕ್ಷೀರಸಾಗರ ಹಾಗೂ ವರ ಸಂಗಮ ದಾಸ್ ಅವರ ಆರತಕ್ಷತೆ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಆಯೋಜಿಸಲಾಗಿತ್ತು. ಹೀಗಾಗಿ ಬೆಂಗಳೂರಿಗೆ ಬರಲು ಡಿಸೆಂಬರ್ 2ಕ್ಕೆ ಈ ಜೋಡಿ ವಿಮಾನ ಟಿಕೆಟ್ ಬುಕ್ ಮಾಡಿತ್ತು. ಇವರ ಜೊತೆ ಅನೇಕ ಸಂಬಂಧಿಕರೂ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಹುಬ್ಬಳ್ಳಿ ತಲುಪುವ ಪ್ಲಾನ್ ಇವರದ್ದಾಗಿತ್ತು.
ಇದನ್ನೂ ಓದಿ: ಜರಾ ಜೋಪಾನ…! ಬಿದ್ದಿತು ರೀ ಬಿದರಿ!!
ಆದರೆ ದೇಶಾದ್ಯಂತ ಅನೇಕ ವಿಮಾನಗಳ ಸಂಚಾರ ರದ್ದಾಗಿದೆ. ಅದೇ ರೀತಿ ಮೇಧಾ ಹಾಗೂ ಸಂಗಮ ದಾಸ್ ಪ್ರಯಾಣಿಸಬೇಕಿದ್ದ ವಿಮಾನ ಸಂಚಾರದ ಅವಧಿ ಮುಂದೂಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇವರು ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಆದರೆ ಏಕಾಏಕಿ ವಿಮಾನ ಸಂಚಾರ ರದ್ದಾಗಿದೆ. ಹೀಗಾಗಿ ವಧು – ವರರು ತಮ್ಮದೇ ಆರತಕ್ಷತೆ ಕಾರ್ಯಕ್ರಮಕ್ಕೆ ಗೈರಾಗುವಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ವಧು – ವರರಿಲ್ಲದೇ ಆರತಕ್ಷತೆ ರದ್ದು ಮಾಡುವ ನಿರ್ಧಾರಕ್ಕೆ ಬರದ ಕುಟುಂಬಸ್ಥರು ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಪಯಾರ್ಯ ವ್ಯವಸ್ಥೆ ಮಾಡಿದ್ದಾರೆ. ಮಗಳು ಹಾಗೂ ಅಳಿಯ ನಿಲ್ಲಬೇಕಿದ್ದ ಜಾಗದಲ್ಲಿ ವಧುವಿನ ತಂದೆ- ತಾಯಿಯೇ ವಧು ವರರಂತೆ ನಿಂತು ಎಲ್ಲರಿಂದ ಶುಭಾಶಯ ಸ್ವೀಕರಿಸಿದ್ದಾರೆ .
ಇತ್ತ ವಧು ಮೇಧಾ ಹಾಗೂ ವರ ಸಂಗಮ್ ದಾಸ್ ಇಬ್ಬರೂ ಭುವನೇಶ್ವರದಲ್ಲಿದ್ದುಕೊಂಡೇ ವಧು – ವರರಂತೆ ತಯಾರಾಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ತಮ್ಮ ಆರತಕ್ಷತೆ ಕಾರ್ಯಕ್ರಮ ವೀಕ್ಷಿಸಿದ್ದಾರೆ . ಇತ್ತ ಮೇಧಾ ತಂದೆ ತಾಯಿ ಆರತಕ್ಷತೆಯ ಎಲ್ಲಾ ಶಾಸ್ತ್ರಗಳನ್ನು ತಾವೇ ಪೂರೈಸಿದ್ದಾರೆ.



