ಶಿರಸಿ ಮಾರಿಕಾಂಬಾ ಜಾತ್ರೆ ಬೆನ್ನಲ್ಲೇ ಸೈಬರ್ ವಂಚಕರಿಂದ ಮೋಸದ ಜಾಲ : ಭಕ್ತಾದಿಗಳೇ ಎಚ್ಚರ, ಎಚ್ಚರ…
ಶಿರಸಿ : ಕರ್ನಾಟಕದ ಸುಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆ ಆರಂಭಗೊಂಡಿದೆ. ರಾಜ್ಯದ ನಾನಾ ಭಾಗಗಳಿಂದ ಮಾರಿಕಾಂಬೆಯ ದರ್ಶನಕ್ಕೆ ಜನಸಾಗರವೇ ಹರಿದುಬರ್ತಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಕೆಲ ಸೈಬರ್ ವಂಚಕರು ಜನಸಾಮಾನ್ಯರನ್ನು ವಂಚಿಸಲು ಮುಂದಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು ಈ ಸಂಬಂಧ ಸೈಬರ್ ವಂಚಕರ ಮೇಲೆ ಶಿರಸಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಕುಮಾರ್ಚನೆ ಹಾಗೂ ಸೇವೆ, ದೇಣಿಗೆ ವಿಚಾರದಲ್ಲಿ ಎಐ ವಿಡಿಯೋವೊಂದನ್ನು ಹರಿಬಿಟ್ಟು ಭಕ್ತರಿಂದ ಹಣ ಪೀಕಲು ಈ ಸೈಬರ್ ವಂಚಕರು ಯೋಜನೆ ರೂಪಿಸಿದ್ದರು. Yajaman ಹೆಸರಿನ ಅಕೌಂಟ್ ನಿಂದ ವಂಚನೆ ನಡೆಯುತ್ತಿದ್ದುದ್ದು ಗಮನಕ್ಕೆ ಬಂದಿದ್ದು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನು ದೇವಸ್ಥಾನದ ಸೇವೆಯ ವಿಚಾರದಲ್ಲಿ ಶ್ರೀ ಮಾರಿಕಾಂಬಾ ದೇವಿ ಆಡಳಿತ ಮಂಡಳಿಯಿಂದ ಸ್ಪಷ್ಟನೆ ಹೊರಬಿದ್ದಿದೆ. ಭಕ್ತರಲ್ಲಿ ಸೈಬರ್ ವಂಚಕರಿಂದ ಎಚ್ಚರಿಕೆಯಿಂದ ಇರುವಂತೆ ಮಾರಿಕಾಂಬಾ ದೇವಿ ಆಡಳಿತ ಮಂಡಳಿ ಮನವಿ ಮಾಡಿದೆ. ಅಲ್ಲದೇ www.marikambatemple.com ಇದೊಂದೇ ದೇವಸ್ಥಾನದ ಅಧಿಕೃತ ವೆಬ್ಸೈಟ್ ಆಗಿದ್ದು ದೇಣಿಗೆ ಹಾಗೂ ಸೇವೆಯ ವಿಚಾರದಲ್ಲಿ ಇದೊಂದೇ ವೆಬ್ಸೈಟ್ ಸಂಪರ್ಕಿಸಲು ಮನವಿ ಮಾಡಲಾಗಿದೆ. ಇಲ್ಲವಾದಲ್ಲಿ ನೇರವಾಗಿ ದೇವಸ್ಥಾನಕ್ಕೆ ಬಂದು ಹಣಪಾವತಿಸುವಂತೆ ದೇಗುಲದ ಆಡಳಿತ ಮಂಡಳಿ ಭಕ್ತರಿಗೆ ಮಾಹಿತಿ ನೀಡಿದೆ.



