ನನ್ನ ಮಗ ಅನ್ನೋ ಕಾರಣಕ್ಕೆ ಯಾವುದು ಸುಲಭವಾಗಿ ಸಿಗೋದು ಬೇಡ…! ಮೊದಲು ಕಸ ಹೊಡೆಯುವುದನ್ನು ಕಲಿಯಲಿ…!

ಸಾಮಾನ್ಯವಾಗಿ ಸ್ಟಾರ್ ನಟರು ತಮ್ಮ ಮಕ್ಕಳ ಆಸೆ ಪೊರೈಸೋಕೆ ಏನು ಬೇಕಾದರೂ ರೆಡಿ ಅನ್ನೋದು ನಾವೆಲ್ಲ ಕೇಳಿರುತ್ತೇವೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ನನ್ನ ಮಗನಿಗೆ ಸುಲಭವಾಗಿ ಯಾವುದು ಸಿಗಬಾರದು. ಮೊದಲು ಕಸ ಹೊಡೆಯೋದನ್ನು ಕಲಿಯಬೇಕು ಎನ್ನೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸದ್ಯ ರಾಬರ್ಟ್ ಸಿನಿಮಾ ರಿಲೀಸ್ ಸಿದ್ಧತೆಯಲ್ಲಿರೋ ದರ್ಶನ್ ಈ ಕುರಿತು ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವಾಗ ಸ್ಪಷ್ಟವಾಗಿ ಮಗ ಕಷ್ಟ ಪಟ್ಟು ಮುಂದಕ್ಕೆ ಬರಬೇಕು ಅನ್ನೋ ಸಂದೇಶ ನೀಡಿದ್ದಾರೆ. ದರ್ಶನ್ ಗೆ ಏಕಮಾತ್ರ ಪುತ್ರ ವಿನೀಶ್. 12 ವರ್ಷದ ವಿನೀಶ್ ಈಗಾಗಲೇ ತಂದೆಯ ಜೊತೆ 2 ಚಿತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾನೆ.

ವಿನೀಶ್ ಸ್ಯಾಂಡಲ್ ವುಡ್ ಎಂಟ್ರಿ ಹಾಗೂ ಸಿನಿಕೆರಿಯರ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದರ್ಶನ್ ನನ್ನ ಮಗ ಮೊದಲು ಕಸ ಹೊಡೆಯಲಿ, ಬದುಕುವುದನ್ನು ಕಲಿಯಲಿ. ಆಮೇಲೆ ಸ್ಯಾಂಡಲ್ವುಡ್ ಗೆ ಬರಲಿ ಎಂದಿದ್ದಾರೆ. ವಿನೀಶ್ ಮೊದಲು ಚೆನ್ನಾಗಿ ಓದಬೇಕು. ಆಮೇಲೆ ಚಿತ್ರರಂಗಕ್ಕೆ ಬರೋದಾದರೇ ಬಂದು ಲೈಟ್ ಹೇಗೆ ವರ್ಕ್ ಆಗುತ್ತೆ ಅನ್ನೋದನ್ನು ಕಲಿಯಲಿ. ಅಲ್ಲಿಂದ ಅವನ ಜರ್ನಿ ಶುರುವಾಗಬೇಕು.

ದರ್ಶನ್ ಮಗ ಅನ್ನೋ ಕಾರಣಕ್ಕೆ ಅವನಿಗೆ ಈಸಿ ಮೀಲ್ ಸಿಗಬಾರದು. ನನ್ನ ಅಕ್ಕನ ಮಗ ಚಂದು ಕೂಡ ಚಿತ್ರರಂಗಕ್ಕೆ ಬರಲು ಸಿದ್ಧವಾಗಿದ್ದಾನೆ. ಅವನಿಗೂ ಇದೇ ಪಾಠ ಹೇಳಿದ್ದೇನೆ. ಟೆಕ್ನಿಕಲ್ ಡಿಪಾರ್ಟ್ಮೆಂಟ್ ನಲ್ಲಿ ಸ್ವಲ್ಪ ದಿನ ಮಣ್ಣು ಹೊರು ಎಂದಿದ್ದೇನೆ. ಸೆಟ್ ನಲ್ಲಿ ಓಡಾಡಿ ಕೆಲಸ ಕಲಿತ್ರೆ ಸ್ವಲ್ಪ ಭಯ ಹೋಗುತ್ತೆ. ಅಷ್ಟೇ ಅಲ್ಲ ಸಿನಿಮಾ ಅಂದ್ರೆ ಏನು ಅಂತ ಅರ್ಥ ಆಗುತ್ತೆ. ಹೀಗೆ ಒಂದೊಂದೇ ಮೆಟ್ಟಿಲಾಗಿ ಹೋಗಿ ಗೆದ್ದ ಗೆಲುವು ತುಂಬಾ ಖುಷಿ ಕೊಡುತ್ತೆ ಎಂದಿದ್ದಾರೆ.

ನಾನು ಗೌರಿಶಂಕರ್ ಸರ್ ಜೊತೆ ಹಿಂದೆ ನಿಂತು ಕೆಲಸ ಕಲಿತಿದ್ದೇನೆ. ಲೈಟಿಂಗ್ ಕೆಲಸ ಮುಗಿಸಿದ ಬಳಿಕ ಸೀನ್ ಶೂಟಿಂಗ್ ನೋಡ್ತಿದ್ದೆ. ಅಲ್ಲಿಂದ ನಟನೆಗೆ ಬಂದೆ. ಹೀಗಾಗಿ ಎಲ್ಲರಿಗೂ ಇದೇ ದಾರಿ ಸರಿ. ನನ್ನ ಅಕ್ಕನ ಮಗನಿಗೂ ಸೆಟ್ ನಲ್ಲಿ ನನ್ನ ಕ್ಯಾರಾವ್ಯಾನ್ ಗೆ ಬರೋದು, ನನ್ನ ಜೊತೆ ಊಟಕ್ಕೆ ಕುರೋದು ಬೇಡ ಎಂದಿದ್ದೇನೆ ಎಂದು ದರ್ಶನ್ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

ಸಾಮಾನ್ಯವಾಗಿ ಹಿರೋಗಳು ತಮ್ಮ ಮಕ್ಕಳನ್ನು ಹೀರೋ-ಹೀರೋಯಿನ್ ಆಗಿ ಲಾಂಚ್ ಮಾಡಲು ಬಯಸುತ್ತಾರೆ. ಆದರೆ ದರ್ಶನ್ ಮಾತ್ರ ತನ್ನ ಮಗನಿಗೆ ಹಾಗೂ ಅಕ್ಕನ ಮಗನಿಗೆ ಚಿತ್ರರಂಗದಲ್ಲಿ ಮಣ್ಣುಹೊತ್ತು ಆಮೇಲೆ ತೆರೆ ಕಾಣಿಸಿಕೊಳ್ಳಬೇಕು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.  

Comments are closed.