ಲಂಚ ಕೊಡದ್ದಕ್ಕೆ ಯುವಕನ್ನು ವಿವಸ್ತ್ರಗೊಳಿಸಿ ಪೊಲೀಸರಿಂದ ಹತ್ಯೆ
Crime News: ಇಂಜಿನಿಯರಿಂಗ್ ಪದವಿ ಮುಗಿಸಿ ಸಂಭ್ರಮಿಸುತ್ತಿದ್ದ ಯುವಕ ಪೊಲೀಸರ ಕುಕೃತ್ಯಕ್ಕೆ ಸಾವನ್ನಪ್ಪಿದ ಅಮಾನವೀಯ ಘಟನೆಯು ಮಧ್ಯಪ್ರದೇಶದ ಭೋಪಾಲ್ನಲ್ಲಿ ಸಂಭವಿಸಿದೆ.
ಬಿಯರ್ ಪಾರ್ಟಿಯಲ್ಲಿ ಮಧ್ಯಪ್ರವೇಶಿಸಿದ ಇಬ್ಬರು ಖಾಕಿ ಪಡೆ 22 ವರ್ಷದ ಇಂಜಿನಿಯರ್ ಬಟ್ಟೆ ಬಚ್ಚಿ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಹಣ ಸಿಗದ ಕಾರಣಕ್ಕೆ ಆತನನ್ನು ಹೊಡೆದು ಸಾಯಿಸಿದ್ದಾರೆ.
ಭೋಪಾಲ್ನ ಇಂದ್ರಪುರಿ ಎಂಬ ಪ್ರದೇಶದಲ್ಲಿ ಗುರುವಾರದಂದು ಈ ಘಟನೆ ಸಂಭವಿಸಿದೆ. ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು ಮೃತ ಯುವಕನ ಕುಟುಂಬಸ್ಥರು ನ್ಯಾಯಕ್ಕೆ ಆಗ್ರಹಿಸುತ್ತಿದ್ದಾರೆ.
ಇಂಜಿನಿಯರಿಂಗ್ ಪದವಿ ಪೂರೈಸಿದ ಯುವ ಉದಿತ್ ಭೋಪಾಲ್ಗೆ ಮರಳಿದ್ದ. ಕಂಪನಿಯಲ್ಲಿ ಕೆಲಸ ಕೂಡ ದೊರಕಿದ್ದರಿಂದ ಕಾಲೇಜಿಗೆ ತೆರಳಿ ಪದವಿ ಪ್ರಮಾಣಪತ್ರವನ್ನು ಪಡೆಯಲು ಸ್ನೇಹಿತರೊಂದಿಗೆ ಸೆಹೋರ್ನಲ್ಲಿರುವ ತನ್ನ ಇಂಜಿನಿಯರಿಂಗ್ ಕಾಲೇಜಿಗೆ ತೆರಳಿದ್ದ .
Also Read: ಮನೆಗೆ ಬಾರಲು ಒಪ್ಪದ ಪತ್ನಿ : ಹೆತ್ತ ಮಕ್ಕಳ ಕತ್ತು ಸೀಳಿ ಕೊಂದ ಪಾಪಿ ತಂದೆ
ಆದರೆ ಸ್ನೇಹಿತರೊಂದಿಗಿನ ಆತನ ಈ ಪಯಣ ಆತನ ಜೀವನದ ಕೊನೆಯ ಪಯಣವಾಗಬಹುದು ಎಂಬ ಊಹೆ ಯಾರಿಗೂ ಇರಲಿಲ್ಲ. ಹೊಸ ಕೆಲಸ ದೊರಕಿದ್ದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡಲು ಉದಿತ್ ಮುಂದಾಗಿದ್ದ ಎನ್ನಲಾಗಿದೆ.
ಬಿಯರ್ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಎಂಟ್ರಿ ಕೊಟ್ಟ ಪೊಲೀಸರು 10 ಸಾವಿರ ರೂಪಾಯಿ ಲಂಚಕ್ಕೆ ಪೀಡಿಸಿದ್ದಾರೆ ಎನ್ನಲಾಗಿದೆ. ಹಣಕೊಡಲು ನಿರಾಕರಿಸಿದಾಗ ಉದಿತ್ನನ್ನು ವಿವಸ್ತ್ರಗೊಳಿಸಿ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಪೊಲೀಸರು ಪರಾರಿಯಾಗಿದ್ದಾರೆ.
ಈ ಪ್ರಕರಣದ ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ ಕಾನ್ಸ್ಟೇಬಲ್ಗಳು ಉದಿತ್ನನ್ನು ವಿವಸ್ತ್ರಗೊಳಿಸಿ ಮನಬಂದಂತೆ ಥಳಿಸಿದ್ದರು ಎನ್ನಲಾಗಿದೆ. ಇದಾದ ಬಳಿಕ ಉದಿತ್ ವಾಂತಿ ಮಾಡಿಕೊಂಡಿದ್ದಾನೆ.
ಕೂಡಲೇ ಸ್ನೇಹಿತರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯರು ಉದಿತ್ನ್ನು ಏಮ್ಸ್ಗೆ ಸ್ಥಳಾಂತರಿಸಿದ್ದರು. ಆದರೆ ಏಮ್ಸ್ ವೈದ್ಯರು ಉದಿತ್ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದ ಎಂದು ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಕೂಡ ವೈರಲ್ ಆಗಿದ್ದು. ದೊಣ್ಣೆ ಹಿಡಿದ ಪೊಲೀಸ್ ಒಬ್ಬರು ಕಪ್ಪು ಕಾರಿನ ಸಮೀಪವಿರುವ ಪಾರ್ಕಿಂಗ್ ಸ್ಥಳಕ್ಕೆ ಶರ್ಟ್ ಧರಿಸದೇ ಇರುವ ಉದಿತ್ ಜೊತೆ ನಡೆದುಕೊಂಡು ಹೋಗಿದ್ದಾರೆ. ಕೂಡಲೇ ಅಲ್ಲಿಗೆ ಸ್ಕೂಟರ್ ಬರುತ್ತದೆ . ಮತ್ತು ಇನ್ನೊಬ್ಬ ಪೊಲೀಸ್ ಅಧಿಕಾರಿ ತನ್ನ ಸ್ನೇಹಿತರೊಂದಿಗೆ ಬರುತ್ತಾನೆ. ಸ್ನೇಹಿತರು ಪೊಲೀಸರೊಂದಿಗೆ ಮಾತನಾಡುತ್ತಿರುವಾಗ, ಮೃತ ಉದಿತ್ಗೆ ದೊಣ್ಣೆಯಿಂದ ಥಳಿಸಿದ್ದಾರೆ.
Also Read: ಬರ್ತಡೇ ಪಾರ್ಟಿ : 20 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಇನ್ನು ಈ ವಿಚಾರವಾಗಿ ಮೃತ ಉದಿತ್ ತಂದೆ ಮಾತನಾಡಿದ್ದು, ನನ್ನ ಮಗನನ್ನು ಪೊಲೀಸರೇ ಕೊಂದಿರುವುದರಿಂದ ಅವರಿಂದ ನಾವು ನ್ಯಾಯಯುತ ತನಿಖೆ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಎಸ್ಐಟಿ ಅಥವಾ ಸಿಬಿಐಗೆ ಸಲ್ಲಿಸಬೇಕು.ನಮ್ಮ ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತು ಪಟ್ವಾರಿ ಕೂಡ ಈ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಇದು ಪೊಲೀಸರೇ ನಡೆಸಿರುವ ಹತ್ಯೆ. ಆದರೆ ಮುಖ್ಯಮಂತ್ರಿಗಳಾಗಲಿ, ಗೃಹ ಮಂತ್ರಿಗಳಾಗಲಿ, ಸ್ಥಳೀಯ ಸಚಿವರು ಯಾರೊಬ್ಬರೂ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬುವ ಕಾರ್ಯ ಮಾಡಿಲ್ಲ. ಮಧ್ಯಪ್ರದೇಶ ಸರ್ಕಾರ ಸೂಕ್ಷ್ಮತೆ ಇಲ್ಲದ ಸರ್ಕಾರ ಎಂದು ಜರಿದಿದ್ದಾರೆ.



