ಧರ್ಮಸ್ಥಳ ಬುರುಡೆ ಪ್ರಕರಣ : ಎಸ್ಐಟಿ ತನಿಖೆಯಲ್ಲಿ ಸಂಪೂರ್ಣ ಬಯಲಾಯ್ತು ಬುರುಡೆ ಗ್ಯಾಂಗ್ನ ಅಸಲಿಯತ್ತು!
ದೇಶಾದ್ಯಂತ ಸಂಚಲನ ಮೂಡಿಸಿದ್ದ ಧರ್ಮಸ್ಥಳದಲ್ಲಿ ಅಪರಿಚಿತ ಶವಗಳನ್ನು ಹೂತಿಟ್ಟ ಪ್ರಕರಣ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಎಸ್ಐಟಿ ತನಿಖೆ ನಡೆಸಿದ್ದು ಪ್ರಾಥಮಿಕ ತನಿಖೆಯಲ್ಲಿ ಬುರುಡೆ ಗ್ಯಾಂಗ್ನ ಷಡ್ಯಂತ್ರವನ್ನು ಬಯಲಿಗೆಳೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮಾಜಿ ಮಾಸ್ಕ್ ಮ್ಯಾನ್ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋರಿ, ವಿಠ್ಠಲಗೌಡ, ಗಿರೀಶ್ ಮಟ್ಟಣನವರ್, ಟಿ.ಜಯಂತ್ ಹಾಗೂ ಸುಜಾತಾ ಭಟ್ ಅವರು ಈ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಎಸ್ಐಟಿ ದೃಢಪಡಿಸಿದೆ.
ಎಸ್ಐಟಿ ತನಿಖೆಯಲ್ಲಿ ಚಿನ್ನಯ್ಯನಿಗೆ ಹಣದ ಆಮೀಷ ನೀಡಲಾಗಿತ್ತು ಎಂಬುದು ತಿಳಿದುಬಂದಿದೆ. ಬುರುಡೆ ಗ್ಯಾಂಗ್ ಚಿನ್ನಯ್ಯನಿಗೆ ಹಣ ನೀಡಿ ಈ ರೀತಿ ಸುಳ್ಳು ಕತೆ ಕಟ್ಟುವಂತೆ ಪುಸಲಾಯಿಸಿತ್ತು. ವಿಠ್ಠಲಗೌಡ ಹಾಗೂ ಮಹೇಶ್ ಶೆಟ್ಟಿ ತಿಮರೋಡಿಯೊಂದಿಗೆ ಮೊದಲೇ ಪರಿಚಯ ಹೊಂದಿದ್ದ ಚಿನ್ನಯ್ಯನಿಂದ ಸಂಪೂರ್ಣ ಸುಳ್ಳು ಹೇಳಿಸಿ ವಿಡಿಯೋ ಮಾಡಿಕೊಳ್ಳಲಾಗಿತ್ತು. ತಿಮರೋಡಿ ಮನೆಯಲ್ಲಿಯೇ ವಾಸವಿದ್ದ ಚಿನ್ನಯ್ಯನಿಗೆ ಈ ಸುಳ್ಳು ಪ್ರಕರಣವನ್ನು ಹೆಣೆಯುವಂತೆ ಸಂಪೂರ್ಣ ತರಬೇತಿ ನೀಡಲಾಗಿತ್ತು. ಇದೇ ಸುಳ್ಳು ಕತೆಯ ಭಾಗವಾಗಿ ಈ ಬುರುಡೆ ಗ್ಯಾಂಗ್ ಒಂದು ತಲೆಬುರುಡೆಯನ್ನು ಚಿನ್ನಯ್ಯನ ಕೈಗೆ ನೀಡಿ.. ಪೊಲೀಸರಿಗೆ ದೂರು ನೀಡುವಂತೆ ಹೇಳಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ: ಮಂಗಳೂರು ಯುವಕರ ದುರ್ಮರಣ
ಈ ಬುರುಡೆ ಗ್ಯಾಂಗ್ನ್ನು ನಂಬಿ ಸುಳ್ಳು ಹೇಳಿ ಸಿಕ್ಕಿಬಿದ್ದ ಚಿನ್ನಯ್ಯ ಇದೀಗ ಜೈಲುಪಾಲಾಗಿದ್ದಾರೆ.ಕೋರ್ಟ್ನಿಂದ ಜಾಮೀನು ಮಂಜೂರಾಗಿದ್ದರೂ ಸಹ 1 ಲಕ್ಷ ರೂಪಾಯಿಗಳ ಭದ್ರತಾ ಬಾಂಡ್ ಕಟ್ಟಲು ಯಾರೂ ಸಹಕಾರ ನೀಡದ ಕಾರಣ ಚಿನ್ನಯ್ಯ ಜೈಲಿನಲ್ಲಿಯೇ ಕುಳಿತುಕೊಳ್ಳುವಂತೆ ಆಗಿದೆ.
ಇನ್ನು ಈ ಎಲ್ಲದರ ನಡುವೆ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯಾ ಮನೆಯವರಿಗೂ ಚಿನ್ನಯ್ಯನ ಪರಿಚಯ ಇದೆ ಎಂಬ ಸ್ಫೋಟಕ ಮಾಹಿತಿ ನೀಡಿದ್ದರು.ನಾನು,ಚಿನ್ನಯ್ಯ ಹಾಗೂ ಸೌಜನ್ಯಾ ಮನೆಯವರು ಸ್ವಾಮೀಜಿಯವರ ಮನೆಗೆ ಹೋಗಿದ್ದಾಗಿ ಹೇಳಿಕೊಂಡಿದ್ದರು.ಸ್ವಾಮೀಜಿಗಳ ಎದುರು ಚಿನ್ನಯ್ಯ ಒಂದೂವರೆ ಗಂಟೆ ಮಾತನಾಡಿದ್ದರು. ಆ ವೇಳೆ ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ಅಭಯ ನೀಡಿದ್ದ ಆ ಸ್ವಾಮೀಜಿಗಳು ಈಗ ಜಾಣಮೌನಕ್ಕೆ ಜಾರಿದ್ದಾರೆ ಎಂದು ಆರೋಪಿಸಿದ್ದರು.



