ಸೌಜನ್ಯಾ ಪರ ಹೋರಾಟಗಾರ ಮಹೇಶ್​ ಶೆಟ್ಟಿ ತಿಮರೋಡಿಗೆ ಮತ್ತೊಮ್ಮೆ ಗಡಿಪಾರು ಸಂಕಷ್ಟ!

ಸೌಜನ್ಯ ಪರ ಹೋರಾಟಗಾರ ಮಹೇಶ್​ ಶೆಟ್ಟಿ ತಿಮರೋಡಿಗೆ ಮತ್ತೊಮ್ಮೆ ಗಡಿಪಾರು ಸಂಕಷ್ಟ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಮಹೇಶ್​ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಮತ್ತೆ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್​ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್​ ಆದೇಶ ಹೊರಡಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಮಹೇಶ್​ ಶೆಟ್ಟಿ ತಿಮರೋಡಿಗೆ ಗಡಿಪಾರು ನೋಟಿಸ್​ ನೀಡಿದ್ದ ಎಸಿ ಯಾಕೆ ನಿಮ್ಮನ್ನು ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿದ್ದರು. ಡಿಸೆಂಬರ್​ 7ನೇ ತಾರೀಖಿನಂದು ಸಹಾಯಕ ಆಯುಕ್ತರ ಗಡಿಪಾರು ನೋಟಿಸ್​ಗೆ ಮಹೇಶ್​ ಶೆಟ್ಟಿ ತಿಮರೋಡಿ ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು.
ವಕೀಲರ ಮೂಲಕ ಆಕ್ಷೇಪಣೆ ಸಲ್ಲಿಸಿದ್ದ ತಿಮರೋಡಿ, ಗಡಿಪಾರು ನೋಟಿಸ್​ ವಿರುದ್ಧ ವಾದ ಮಂಡಿಸಿದ್ದರು. ವಾದ – ಪ್ರತಿವಾದಗಳನ್ನು ಆಲಿಸಿದ ಬಳಿಕ ಇದೀಗ ಮಹೇಶ್​ ಶೆಟ್ಟಿ ತಿಮರೋಡಿಗೆ ಹಿನ್ನಡೆ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಮರೋಡಿಯನ್ನು ಏಕೆ ಗಡಿಪಾರು ಮಾಡಬೇಕು ಎಂಬುದಕ್ಕೆ ಸೂಕ್ತ ಕಾರಣ ನೀಡಿ ವರದಿ ಸಲ್ಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಸೌಜನ್ಯಾ ಪರ ಹೋರಾಟಗಾರನಿಗೆ ಮತ್ತೊಮ್ಮೆ ಈ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಸದನದಲ್ಲಿ ಪೇಚಿಗೆ ಸಿಲುಕಿದ ಲಕ್ಷ್ಮೀ ಹೆಬ್ಬಾಳ್ಳ‌ರ್ ಬೆಂಬಲಕ್ಕೆ ನಿಂತ ಡಿ.ಕೆ ಶಿವಕುಮಾರ್ : ಸಿಎಂ ಇಲಾಖೆ ಮೇಲೆ ಆರೋಪ

ಮಹೇಶ್​ ಶೆಟ್ಟಿ ತಿಮರೋಡಿ ವಿರುದ್ಧ ಈ ಹಿಂದಿನ ಕೇಸುಗಳ ಜೊತೆಯಲ್ಲಿ ಹಾಲಿ ಕೇಸುಗಳನ್ನೂ ಸೇರಿಸಿ ಗಡಿಪಾರು ಮಾಡಲಾಗಿದೆ. ಕಳೆದ ಸೆಪ್ಟಂಬರ್​ 18ರಂದು ಒಂದು ವರ್ಷದ ಅವಧಿಗೆ ಅನ್ವಯವಾಗುವಂತೆ ಎಸಿ ಸ್ಟೆಲ್ಲಾ ವರ್ಗೀಸ್​ ಗಡಿಪಾರು ಆದೇಶ ನೀಡಿದ್ದರು. ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ಸರಹದ್ದಿಗೆ ಗಡಿಪಾರು ಮಾಡಿ ಆದೇಶ ಮಾಡಿದ್ದರು. ಆದರೆ ಈ ಗಡಿಪಾರು ಆದೇಶ ರದ್ದುಗೊಳಿಸುವಂತೆ ತಿಮರೋಡಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಎಸಿ ಆದೇಶ ರದ್ದುಗೊಳಿಸಿತ್ತು. ಸೆಕ್ಷನ್​ ಸರಿಪಡಿಸಿ ಹೊಸ ಆದೇಶ ನೀಡುವಂತೆ ಪುತ್ತೂರು ಎಸಿಗೆ ಸೂಚನೆ ನೀಡಿತ್ತು. ಇದರ ಅನ್ವಯ ಎಲ್ಲಾ ಬದಲಾವಣೆಗಳನ್ನು ಮಾಡಿ ಇದೀಗ ಮತ್ತೊಮ್ಮೆ ಅವರನ್ನು ಗಡಿಪಾರು ಮಾಡಲಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories