ಮಣಿಪಾಲ: ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಐಫೋನ್ ಹಿಡಿದು ಅನುಮಾನಾಸ್ಪದವಾಗಿ ನಿಂತಿದ್ದ ಯುವಕ ಅರೆಸ್ಟ್
ಆತ ಮಹಾರಾಷ್ಟ್ರದ ನಾಗಪುರ ಯೋತಮಲ್ ತಾಲೂಕಿನ ತುಕರಾಮ ಎಂಬುವವರ ಪುತ್ರ ಮಹೇಶ್ (29) ಎಂದು ಗುರುತಿಸಲಾಗಿದೆ.

ಮಣಿಪಾಲ ( Manipal) : ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಮುಂಜಾನೆ ವೇಳೆ ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದ ಮಹಾರಾಷ್ಟ್ರ ಮೂಲದ ಯುವಕನೋರ್ವನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬಂಧಿತನಿಂದ ದುಬಾರಿ ಬೆಲೆಯ ಐಫೋನ್ ವಶಪಡಿಸಿಕೊಳ್ಳಲಾಗಿದ್ದು, ಈತ ಯಾವುದೋ ಕೃತ್ಯ ಎಸಗಲು ಹೊಂಚು ಹಾಕುತ್ತಿದ್ದನೆ ಎಂಬ ಶಂಕೆ ವ್ಯಕ್ತವಾಗಿದೆ.
ಮಣಿಪಾಲ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ (ASI) ರಾಮಪ್ರಭು ಅವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಷನ್ ಸಮೀಪದ ರಿಕ್ಷಾ ನಿಲ್ದಾಣದ ಬಳಿ ಒಬ್ಬ ವ್ಯಕ್ತಿ ಕತ್ತಲಲ್ಲಿ ನಿಂತಿರುವುದು ಕಂಡುಬಂದಿದೆ.
ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನ!
ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡ ತಕ್ಷಣ ಆ ವ್ಯಕ್ತಿ ತನ್ನ ಇರುವಿಕೆಯನ್ನು ಮರೆಮಾಚಲು ಪ್ರಯತ್ನಿಸಿದ್ದಾನೆ. ಪೊಲೀಸರು ಆತನ ಸಮೀಪಕ್ಕೆ ಹೋಗುತ್ತಿದ್ದಂತೆಯೇ ಗಾಬರಿಗೊಂಡ ಆತ, ಕತ್ತಲೆಯ ಜಾಗದಲ್ಲಿ ಅಡಗಿಕೊಳ್ಳಲು ಮುಂದಾಗಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ : ಕಾರ್ಕಳ: ಹೆಂಡತಿ ಬಳಿ ಹಣ ಕೇಳಿದ ಪತಿಗೆ ಭರ್ಜರಿ ಉಡುಗೊರೆ: ಬಾಮೈದ, ಪತ್ನಿಯಿಂದಲೇ ಗಂಡನ ಮೇಲೆ ಅಟ್ಯಾಕ್
ಬಂಧಿತನ ವಿವರ ಮತ್ತು ಅನುಮಾನ
ಬಂಧಿತನನ್ನು ವಿಚಾರಣೆ ನಡೆಸಿದಾಗ ಆತ ಮಹಾರಾಷ್ಟ್ರದ ನಾಗಪುರ ಯೋತಮಲ್ ತಾಲೂಕಿನ ತುಕರಾಮ ಎಂಬುವವರ ಪುತ್ರ ಮಹೇಶ್ (29) ಎಂದು ಗುರುತಿಸಲಾಗಿದೆ. ಪೊಲೀಸರು ಆತನನ್ನು ಪರಿಶೀಲಿಸಿದಾಗ ಆತನ ಕೈಯಲ್ಲಿ ಆಕಾಶ ನೀಲಿ ಬಣ್ಣದ ಐಫೋನ್ (Apple iPhone) ಪತ್ತೆಯಾಗಿದೆ.
ಆದರೆ, ಆ ಫೋನ್ ಲಾಕ್ ಆಗಿದ್ದು, ಅದರ ಸಿಮ್ ಕಾರ್ಡ್ ನಂಬರ್ ಬಗ್ಗೆಯಾಗಲಿ ಅಥವಾ ತಾನು ಅಲ್ಲಿ ಯಾಕೆ ನಿಂತಿದ್ದೇನೆ ಎಂಬುದರ ಬಗ್ಗೆಯಾಗಲಿ ಮಹೇಶ್ ಸಮರ್ಪಕ ಉತ್ತರ ನೀಡಿಲ್ಲ. ಇದರಿಂದಾಗಿ ಈತ ಯಾವುದೋ ಕಳ್ಳತನ ಅಥವಾ ಅಪರಾಧ ಕೃತ್ಯ ಎಸಗಲು ಸಂಚು ರೂಪಿಸಿ ಬಂದಿರಬಹುದು ಎಂಬ ಬಲವಾದ ಅನುಮಾನ ಮೂಡಿದೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2026 ರಂತೆ ಕರ್ನಾಟಕ ಪೊಲೀಸ್ ಕಾಯ್ದೆಯ (KP Act) ಕಲಂ 98 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
manipal indrali railway station suspicious man arrested iphone seized



