ಸಮರ್ಥ್ ಶಾಮನೂರು, ಉಮೇಶ್ ಮೇಟಿಗೆ ಟಿಕೆಟ್
ಸಚಿವ ಜಮೀರ್ ಅಹಮದ್ಗೆ ನಿರಾಸೆ
ದಾವಣಗೆರೆ ದಕ್ಷಿಣ ಕ್ಷೇತ್ರ ವಿಧಾನಸಭಾ ಉಪಚುನಾವಣೆಯ ಕಣ ಕುತೂಹಲ ಮೂಡಿಸಿದೆ. ಕಾಂಗ್ರೆಸ್ನಿಂದ ಯಾರಿಗೆ ಟಿಕೆಟ್ ಸಿಗುತ್ತೆ ಎಂಬುದು ಚರ್ಚೆಗೀಡಾಗಿತ್ತು. ಕಾಂಗ್ರೆಸ್ ಅಧಿಕೃತವಾಗಿ ಹೆಸರು ಫೈನಲ್ ಮಾಡಿದೆ. ಸಚಿವ ಎಸ್ಎಸ್ ಮಲ್ಲಿಕಾರ್ಜುನ ಪುತ್ರ ಸಮರ್ಥ ಶ್ಯಾಮನೂರುಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ. ಅಭ್ಯರ್ಥಿಯ ಘೋಷಣೆ ಬಾಕಿ ಇರುವಾಗಲೇ, ಸಮರ್ಥ ಶ್ಯಾಮನೂರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಈಗ ಎಐಸಿಸಿ ಸಮರ್ಥ್ಗೆ ಟಿಕೆಟ್ ನೀಡಿ ಉಪಸಮರದ ಕಣಕ್ಕಿಳಿಸಿದೆ.
2 ನಾಮಪತ್ರ ಸಲ್ಲಿಸಿದ್ದ ಸಮರ್ಥ್
ಸಮರ್ಥ ಶ್ಯಾಮನೂರು ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದರು. ಒಂದು ನಾಮಪತ್ರವನ್ನ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಲ್ಲಿಸಿದ್ದರೆ, ಮತ್ತೊಂದನ್ನು ‘ಪಕ್ಷೇತರ’ ಅಭ್ಯರ್ಥಿಯಾಗಿ ಸಲ್ಲಿಸಿದ್ದರು.
ಅಧಿಕೃತವಾಗಿ ಬಿ-ಫಾರಂ ಸಿಗದ ಕಾರಣ ಮತ್ತು ಟಿಕೆಟ್ ಘೋಷಣೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಎರಡು ನಾಮಪತ್ರ ಸಲ್ಲಿಸಿದ್ದರು. ಈಗ ಪಕ್ಷದ ಚಿಹ್ನೆಯಿಂದಲೇ
ಸಮರ್ಥ್ ಶಾಮನೂರು ಅಖಾಡಕ್ಕೆ ಇಳಿಯುತ್ತಿದ್ದಾರೆ. ಬಿಜೆಪಿಯಿಂದ ಶ್ರೀನಿವಾಸ್ ಸ್ಪರ್ಧೆ ಮಾಡ್ತಿದ್ದು ಭಾರೀ ಪೈಪೋಟಿ ಇದೆ.
ಸುರ್ಜೇವಾಲ ಸಭೆ
ಶ್ಯಾಮನೂರು ಕುಟುಂಬದ ಕುಡಿಯನ್ನೇ ಕಣಕ್ಕಿಳಿಸಲು ಸ್ಥಳೀಯ ನಾಯಕರು ಒಲವು ತೋರಿದ್ದರೂ, ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿತ್ತು. ಯಾಕಂದ್ರೆ ಮುಸ್ಲಿಂ ಸಮುದಾಯ ಈ ಬಾರಿ
ನಮಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿತ್ತು. ಸಚಿವ ಜಮೀರ್ ಅಹಮದ್ ತಮ್ಮ ಸಮುದಾಯಕ್ಕೆ ಟಿಕೆಟ್ ಕೊಡಿಸಲು ಶತಪ್ರಯತ್ನ ಮಾಡಿದ್ರು.. ಹೀಗಾಗಿ ಟಿಕೆಟ್ ಗೊಂದಲ ಉಂಟಾಗಿತ್ತು.
ಸುರ್ಜೇವಾಲ ಸಭೆ ಮೇಲೆ ಸಭೆ ನಡೆಸಿ ಹೈಕಮಾಂಡ್ಗೆ ವರದಿ ನೀಡಿದ್ರು.. ಅಂತಿಮವಾಗಿ ಸಮರ್ಥ್ಗೆ ಮಣೆ ಹಾಕಲಾಗಿದೆ. ಸಮರ್ಥ ಶ್ಯಾಮನೂರು ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಡುತ್ತಿರುವುದು ದಾವಣಗೆರೆಯ ರಾಜಕೀಯ ಸಮೀಕರಣಗಳನ್ನ ಬದಲಿಸುವ ಸಾಧ್ಯತೆಯಿದೆ. ಮುಸ್ಲಿಂ ಸಮುದಾಯ ಸಮರ್ಥ್ಗೆ ಬೆಂಬಲ ಕೊಡುತ್ತಾ? ಅಥವಾ ತಮ್ಮದೇ ಸಮುದಾಯದ ನಾಯಕನನ್ನ ಪಕ್ಷೇತರರಾಗಿ ಚುನಾವಣೆಯಲ್ಲಿ
ನಿಲ್ಲಿಸುತ್ತಾ ಕಾದು ನೋಡಬೇಕಿದೆ.
ಉಮೇಶ್ ಮೇಟಿಗೆ ಟಿಕೆಟ್
ಬಾಗಲಕೋಟೆಯಲ್ಲಿ ಉಮೇಶ್ ಮೇಟಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಟಿಕೆಟ್ಗಾಗಿ ಮೇಟಿ ಕುಟುಂಬದ ಒಳಜಗಳ ತೀವ್ರವಾಗಿತ್ತು. ಉಮೇಶ್ ಮೇಟಿ, ಮಲ್ಲಿಕಾರ್ಜುನ ಮೇಟಿ, ಸಹೋದರಿ ಬಾಯಕ್ಕ ಮೇಟಿ ಮತ್ತು ಮಹಾದೇವಿ ಮೇಟಿ ನಡುವೆ ಪೈಪೋಟಿ ಇತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ. ಪಾಟೀಲ್ ಕುಟುಂಬದವರೊಂದಿಗೆ ಸಂಧಾನ ನಡೆಸಿ ಒಮ್ಮತ ಸಾಧಿಸಿದ್ದಾರೆ. ಉಮೇಶ್ ಮೇಟಿ ರಹಸ್ಯವಾಗಿ ಸಹಿ ಸಂಗ್ರಹಿಸಿ ಹೈಕಮಾಂಡ್ಗೆ ಕಳುಹಿಸಿದ್ದರು. ಅಂತಿಮವಾಗಿ ಕಾಂಗ್ರೆಸ್ ಉಮೇಶ್ ಮೇಟಿಗೆ ಟಿಕೆಟ್ ನೀಡಿದೆ. ಬಿಜೆಪಿಯಿಂದ ವೀರಣ್ಣ ಚರಂತಿಮಠ ಹಾಗೂ ಕಾಂಗ್ರೆಸ್ನಿಂದ ಉಮೇಶ್ ಮೇಟಿ ಉಪಸಮರದ ಅಖಾಡಕ್ಕಿಳಿದಿದ್ದಾರೆ.



