ಹೊಸ ಸಾಹಸಕ್ಕೆ ಮುನ್ನುಡಿ ಬರೆದ ಸಾಧು ಕೋಕಿಲ…! ಕಿರುತೆರೆಗೆ ಗೌರಿಪುರದ ಗಯ್ಯಾಳಿಗಳನ್ನು ಕರೆತಂದ ಕಾಮಿಡಿಕಿಂಗ್…!!

ಕಿರುತೆರೆಯಿಂದ ಹಿರಿತೆರೆಗೆ ಹೋಗೋದು ವಾಡಿಕೆ. ಆದರೆ ಸಂಗೀತ ನಿರ್ದೇಶಕ, ಕಾಮಿಡಿಕಿಂಗ್, ನಿರ್ದೇಶಕ ಹೀಗೆ ಹಿರಿತೆರೆಯಲ್ಲೇ ಬಹುಮುಖ ಪ್ರತಿಭೆ ತೋರಿದ ಸಾಧುಕೋಕಿಲ ಈಗ ಕಿರುತೆರೆಯತ್ತ ಮುಖಮಾಡಿದ್ದಾರೆ. ಸ್ವತಃ ನಿರ್ಮಾಣಕ್ಕೆ ಕೈಹಾಕಿರುವ ಸಾಧುಕೋಕಿಲ  ಪ್ರೇಕ್ಷಕರಿಗೆ ಗೌರಿಪುರದ ಗಯ್ಯಾಳಿಗಳನ್ನು ಪರಿಚಯಿಸಲು ಮುಂದಾಗಿದ್ದಾರೆ.

ಮಾರ್ಚ್ 15 ರಿಂದ ಉದಯ ಟಿವಿಯಲ್ಲಿ ಸಂಜೆ 6.30 ಕ್ಕೆ ಗೌರಿಪುರದ ಗಯ್ಯಾಳಿಗಳು ಸೀರಿಯಲ್ ಪ್ರಸಾರವಾಗಲಿದ್ದು, ಈಗಾಗಲೇ ತೆರೆಕಂಡಿರುವ ಪ್ರೋಮೋ ಸಖತ್ ಕುತೂಹಲ ಮೂಡಿಸಿದೆ. ನಾಲ್ವರು ಧೈರ್ಯಶಾಲಿ ಮಹಿಳೆಯರ ಸಾಹಸವನ್ನು ಚಿತ್ರಿಸುವ ಈ ಧಾರಾವಾಹಿ ಹಾಸ್ಯದ ಜೊತೆಗೆ ಸಸ್ಪೆನ್ಸ್ ಕತೆಯನ್ನು ಪ್ರೇಕ್ಷಕರಿಗೆ ನೀಡಲಿದೆ.

ಗೌರಿಪುರದ ಗಯ್ಯಾಳಿಗಳು ಧಾರಾವಾಹಿ ನಿರ್ಮಾಣದ ಜೊತೆಗೆ  ಸೀರಿಯಲ್ ನ ಟೈಟಲ್ ಸಾಂಗ್ ಗೆ ಸಾಧು ಧ್ವನಿಯಾಗಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನ ಪುನೀತ್ ರಾಜಕುಮಾರ್, ರಮೇಶ್ ಅರವಿಂದ್, ಶಿವರಾಜಕುಮಾರ್, ಸುಧಾರಾಣಿ ಸೇರಿದಂತೆ ಹಲವು ಸ್ಟಾರ್ ನಟ-ನಟಿಯರು ಕನ್ನಡ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು, ಸಾಧು ಕೂಡ ನಿರ್ಮಾಣದ ಜೊತೆ ಕಿರುತೆರೆಗೆ ಜೈ ಎಂದಿದ್ದಾರೆ.

ಸಾಧುಕೋಕಿಲ ಈಗಾಗಲೇ ಕನ್ನಡ ಕಿರುತೆರೆಯ ಹಲವು ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಇವರ ಸಹೋದರ ಕೂಡ ಸೀರಿಯಲ್ ನಲ್ಲಿ ಸಕ್ರಿಯರಾಗಿದ್ದು, ಸಾಧು ಪ್ರೊಡ್ಯೂಸರ್ ಆಗಿ ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

 

ಕನ್ನಡದ ಹಲವು ಚಿರಪರಿಚಿತ ನಟಿಯರನ್ನು ಒಳಗೊಂಡ  ಈ ಸೀರಿಯಲ್ ಹೆಂಗಳೆಯರ ಮನಸೆಳೆಯುವಂತಿದ್ದು, ಇನ್ನೇನು ಒಂದು ವಾರದಲ್ಲಿ ಹೊಸ ಕತೆ ಆರಂಭವಾಗಲಿದೆ.

Comments are closed.