ನಲ್ಲೂರು ಅಕ್ರಮ ಕಸಾಯಿಖಾನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ದನ–ಕರು ಮಾರಾಟ ಮಾಡಿದ್ದ ಸಂಘ ಪರಿವಾರದ ಕಾರ್ಯಕರ್ತ ಬಂಧನ

ಉಡುಪಿ : ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಪತ್ತೆಯಾದ ಅಕ್ರಮ ಕಸಾಯಿಖಾನೆ ಪ್ರಕರಣಕ್ಕೆ ನೂತನ ತಿರುವು ಸಿಕ್ಕಿದ್ದು, ಈ ಪ್ರಕರಣದಲ್ಲಿ ಸಂಘ ಪರಿವಾರದ ಕಾರ್ಯಕರ್ತನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಲ್ಲೂರು ನಿವಾಸಿ ಶಿವಪ್ರಸಾದ್ ಅಲಿಯಾಸ್ ಅಣ್ಣೂ ಮಡಿವಾಳ (28) ಬಂಧಿತ ಕಾರ್ಯಕರ್ತ.

ನವೆಂಬರ್ 12ರಂದು ಕಾರ್ಕಳ ಗ್ರಾಮಾಂತರ ಪೊಲೀಸರು ನಲ್ಲೂರಿನ ಮನೆಯೊಂದರಲ್ಲಿ ಅಕ್ರಮ ಕಸಾಯಿ ಕಾರ್ಯ ನಡೆಯುತ್ತಿರುವ ಮಾಹಿತಿ ಪಡೆದು ದಾಳಿ ನಡೆಸಿದ್ದರು. ಈ ವೇಳೆ ಮನೆಮಾಲೀಕ ಅಶ್ರಫ್ ಅಲಿ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿತ್ತು. ಮನೆ ಒಳಗೆ ದನ–ಕರುಗಳನ್ನು ಕತ್ತರಿಸಿ ಮಾಂಸ ಮಾಡಲಾಗುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದರು.
ಈ ಘಟನೆ ಬಳಿಕ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗ ದಳದ ಕಾರ್ಯಕರ್ತರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ, ದನ–ಕರು ಕಳವು ಮಾಡಿ ಇಲ್ಲಿ ಕೊಲ್ಲಲಾಗಿದೆ, ಮನೆಯನ್ನು ಸರ್ಕಾರ ಮುಟ್ಟುಗೋಲು ಹಾಕಬೇಕು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಪ್ರಕರಣ : ಎಸ್‌ಐಟಿ ತನಿಖೆಯಲ್ಲಿ ಸಂಪೂರ್ಣ ಬಯಲಾಯ್ತು ಬುರುಡೆ ಗ್ಯಾಂಗ್‌ನ ಅಸಲಿಯತ್ತು!

ಅಕ್ರಮ ಕಸಾಯಿಖಾನೆ ಮಾಲೀಕ ಎಂದು ಬಂಧನಕ್ಕೊಳಗಾದ ಅಶ್ರಫ್ ಅಲಿಯನ್ನು ಪೊಲೀಸರು ವಿಚಾರಣೆ ಮಾಡಿದಾಗ ದೊಡ್ಡ ಬಹಿರಂಗತೆ ನಡೆದಿದ್ದು, ದನ–ಕರುಗಳನ್ನು ತಾವು ಕಳವು ಮಾಡಿಲ್ಲ, ಬದಲಾಗಿ ಶಿವಪ್ರಸಾದ್ ಎಂಬ ವ್ಯಕ್ತಿಯೇ ಎಲ್ಲಿಂದಲೋ ಪಡೆದು ತಮಗೆ ಮಾರಾಟ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಆಧಾರದಲ್ಲಿ ಪೊಲೀಸರು ತನಿಖೆಯನ್ನು ವಿಸ್ತರಿಸಿ, ಶಿವಪ್ರಸಾದ್ ಅಲಿಯಾಸ್ ಅಣ್ಣೂ ಮಡಿವಾಳನನ್ನು ಬಂಧಿಸಿದ್ದಾರೆ. ಬಂಧಿತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಿನ ತನಿಖೆ ಮುಂದುವರಿಸಲಾಗಿದೆ. ನಲ್ಲೂರಿನ ಅಕ್ರಮ ಕಸಾಯಿಖಾನೆ ಪ್ರಕರಣ ಈಗ ಮತ್ತಷ್ಟು ಸಂಕೀರ್ಣ ತಿರುವು ತೆಗೆದುಕೊಂಡಿದ್ದು, ಆರೋಪಿಗಳ ಜಾಲ, ದನ–ಕರುಗಳ ಮೂಲ ಮತ್ತು ಅಕ್ರಮ ಮಾರಾಟದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories