ಅಮುಲ್ ಮೊಸರಿನಲ್ಲಿ ಹುಳ : ಐಆರ್ಸಿಟಿಸಿ ಜೊತೆ ಒಪ್ಪಂದ ರದ್ದು
ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಖರೀದಿಸಿದ ಅಮುಲ್ ಮೊಸರಿನಲ್ಲಿ ಹುಳ ಪತ್ತೆಯಾಗಿದ್ದು ರಾಷ್ಟ್ರಮಟ್ಟದಲ್ಲಿ ಅಮುಲ್ ಸಂಸ್ಥೆ ತಲೆತಗ್ಗಿಸುವಂತಾಗಿದೆ.
ನವದೆಹಲಿ : ಐಆರ್ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಅಮುಲ್ ಸಂಸ್ಥೆಯು ಭಾರತೀಯ ರೈಲ್ವೆ ಇಲಾಖೆಯ ಪ್ರೀಮಿಯಂ ರೈಲುಗಳಿಗೆ ಡೈರಿ ಉತ್ಪನ್ನಗಳನ್ನು ಸರಬರಾಜು ಮಾಡುವ ಜವಾಬ್ದಾರಿಯನ್ನು ಹೊತ್ತಿದೆ. ಆದರೆ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಖರೀದಿಸಿದ ಅಮುಲ್ ಮೊಸರಿನಲ್ಲಿ ಹುಳ ಪತ್ತೆಯಾಗಿದ್ದು ರಾಷ್ಟ್ರಮಟ್ಟದಲ್ಲಿ ಅಮುಲ್ ಸಂಸ್ಥೆ ತಲೆತಗ್ಗಿಸುವಂತಾಗಿದೆ. ಪಾಟ್ನಾದಿಂದ ಟಾಟಾನಗರಕ್ಕೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಘಟನೆಯು ವರದಿಯಾಗಿದೆ. ಈ ಸಂಬಂಧ ದೇಶದ ಪ್ರತಿಷ್ಠಿತ ಡೈರಿ ಉತ್ಪನ್ನಗಳ ಸಂಸ್ಥೆಯಾದ ಅಮುಲ್ಗೆ ಸಮನ್ಸ್ ಜಾರಿ ಮಾಡಲಾಗಿದೆ.
ಅಂದಹಾಗೆ ಇದು ಮಾರ್ಚ್ 15ರಂದು ನಡೆದ ಘಟನೆಯಾಗಿದ್ದು, ವಂದೇಭಾರತ್ ರೈಲಿನಲ್ಲಿ ರಿತೇಶ್ ಸಿಂಗ್ ತಮ್ಮ ಆರು ಮಂದಿ ಸಹಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದರು. ಈ ಏಳು ಪ್ರಯಾಣಿಕರಿಗೆ ರೈಲಿನಲ್ಲಿ ದೊರೆತ ಊಟದಲ್ಲಿದ್ದ ಮೊಸರಿನಲ್ಲಿ ಜೀವಂತ ಹುಳುಗಳು ಪತ್ತೆಯಾಗಿದ್ದವು. ಈ ಸಂಬಂಧ ರಿತೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದಾದ ಬಳಿಕ ನಿನ್ನೆ ಅಮುಲ್ ಸಂಸ್ಥೆಗೆ ಸಮನ್ಸ್ ಜಾರಿ ಮಾಡಲಾಗಿದೆ.
ರೈಲ್ವೆ ಸಚಿವಾಲಯವು ಈ ಪ್ರಕರಣ ಸಂಬಂಧ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಹಾಗೂ ಕೃಷ್ಣ ಎಂಟರ್ಪ್ರೈಸಸ್ಗೂ ಭಾರೀ ಮೊತ್ತದ ದಂಡ ವಿಧಿಸಿದೆ. ಅಲ್ಲದೇ ಅಮುಲ್ ಸಂಸ್ಥೆಯೊಂದಿಗಿನ ಒಡಂಬಡಿಕೆಯನ್ನು ನಿಲ್ಲಿಸುವಂತೆ ಸೂಚನೆ ನೀಡಿರುವ ಭಾರತೀಯ ರೈಲ್ವೆ ಇಲಾಖೆಯು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದೆ.
ಇದನ್ನೂ ಓದಿ: ಗ್ರಾಹಕರಿಗೆ ಇಲ್ಲ ‘ಗ್ಯಾಸ್ ಟ್ರಬಲ್’ : ಹೋಟೆಲ್ ಮಾಲೀಕರಿಗೆ ಕೇಂದ್ರದಿಂದ ಖಡಕ್ ಆದೇಶ – ತಪ್ಪಿದರೆ ಬೀಳುತ್ತೆ ಭಾರಿ ದಂಡ!
ಆದರೆ ಈ ಘಟನೆ ಸಂಬಂಧ ಅಮುಲ್ ಸಂಸ್ಥೆಯಾಗಲಿ ಅಥವಾ ಐಆರ್ಸಿಟಿಸಿಯಾಗಲಿ ಯಾವುದೇ ಬಹಿರಂಗ ಹೇಳಿಕೆ ಅಥವಾ ಕ್ಷಮೆಯಾಚನೆ ಮಾಡಿಲ್ಲ. ಅಲ್ಲದೇ ಈ ಘಟನೆಯನ್ನು ಅಮುಲ್ ಯಾವ ರೀತಿ ಸಮರ್ಥಿಸಿಕೊಂಡಿದೆ ಎಂಬುದರ ಬಗ್ಗೆಯೂ ಮಾಹಿತಿ ಬಹಿರಂಗಪಡಿಸಲು ಐಆರ್ಸಿಟಿಸಿ ನಿರಾಕರಿಸಿದೆ ಎನ್ನಲಾಗಿದೆ.



